ರಾಜ್ಯ ಬಜೆಟ್: ವಿಶೇಷ ಅನುದಾನಕ್ಕೆ ಮನವಿ
Friday, February 21, 2025
ಲೋಕಬಂಧು ನ್ಯೂಸ್
ಉಡುಪಿ, ಫೆ.21: ಮುಂಬರುವ ರಾಜ್ಯ ಬಜೆಟ್ನಲ್ಲಿ ಉಡುಪಿ ವಿಧಾನಸಭೆ ಕ್ಷೇತ್ರದ ಅಭಿವದ್ಧಿ ಯೋಜನೆಗಳಿಗೆ ವಿಶೇಷ ಅನುದಾನ ಹಾಗೂ ತುಳುನಾಡಿನ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಗುರುವಾರ ಮನವಿ ಮಾಡಿದರು.ಮುಂಬರುವ ರಾಜ್ಯ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಉತ್ತಮ ಸಾಧನೆ ಮಾಡುತ್ತಿರುವ ಉಡುಪಿ ಜಿಲ್ಲೆಯ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ, ನೂತನ ಜಿಲ್ಲಾಸ್ಪತ್ರೆ ಕಟ್ಟಡ ಕಾರ್ಯಾಚರಣೆಗೆ ಅಗತ್ಯವಿರುವ 48.36 ಕೋಟಿ ಹೆಚ್ಚುವರಿ ಅನುದಾನ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ವಹಣೆಗೆ ಅನುದಾನ, ಮೀನುಗಾರಿಕೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಡೀಸೆಲ್ ಸಬ್ಸಿಡಿ, ನಾಡದೋಣಿಗಳಿಗೆ ಸೀಮೆಎಣ್ಣೆ ಪೂರೈಕೆ, ಬಂದರು ಅಭಿವೃದ್ಧಿ ಮತ್ತು ಡ್ರೆಜ್ಜಿಂಗ್, ಸೀ ಆ್ಯಂಬುಲೆನ್ಸ್, ರೈತಾಪಿ ವರ್ಗಗಳಿಗೆ ನೀಡುವ ಸಾಲ ಸೌಲಭ್ಯ ಮೀನುಗಾರರರಿಗೂ ವಿಸ್ತರಣೆ, ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ, ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನ ಮೀಸಲು, ಪ್ರಾಕೃತಿಕ ವಿಕೋಪ ಪರಿಹಾರಕ್ಕೆ 25 ಕೋಟಿ ಮೀಸಲು, ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಈ ಹಿಂದಿನಂತೆ ಗರಿಷ್ಠ 5 ಲಕ್ಷ ಪರಿಹಾರ, ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕೃಷಿ ಕಾಲೇಜು ಸ್ಥಾಪನೆ, ಸರ್ಕಾರಿ ಬಸ್ ಸೇವೆ ಹೆಚ್ಚಳ, ಕ್ರೀಡಾ ಚಟುವಟಿಕೆಗಳಿಗೆ ಕ್ರೀಡಾಂಗಣ ನಿರ್ಮಾಣ ಬ್ರಹ್ಮಾವರದಲ್ಲಿ ಪ್ರವಾಸಿ ಬಂಗಲೆ, ಸರ್ಕಾರಿ ವೈದ್ಯಕೀಯ ಕಾಲೇಜು, ಪರ್ಯಾಯ ಮಹೋತ್ಸವಕ್ಕೆ ವಿಶೇಷ 25 ಕೋಟಿ ಅನುದಾನ, ಮಣ್ಣಪಳ್ಳ ಕೆರೆ ಅಭಿವೃದ್ಧಿ, ಕಂಬಳ ಕ್ರೀಡೆಗೆ ಅನುದಾನ, ಉಡುಪಿ ನಗರದಲ್ಲಿ ಹೆಚ್ಚುವರಿಯಾಗಿ ಉಪ ವಿಭಾಗಾಧಿಕಾರಿಗಳ ಕಚೇರಿ ಮಂಜೂರು, ಕರಾವಳಿ ಜಿಲ್ಲೆಯ ಮರಳು ಸಮಸ್ಯೆ ಪರಿಹಾರ ರೂಪಿಸಲು ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದರು.
ಧಾರ್ಮಿಕ ಆಚರಣೆಗೆ ಅವಕಾಶ: ಸಿಎಂ ಭರವಸೆ
ತುಳುನಾಡಿನ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಾದ ಕಂಬಳ, ಯಕ್ಷಗಾನ, ನೇಮೋತ್ಸವ, ನಾಗಮಂಡಲ ಹಾಗೂ ದೈವಾರಾಧನೆ ಚೌಕಟ್ಟಿನಲ್ಲಿ ರಕ್ತಾಹಾರದ ಕಲ್ಪನೆಯಲ್ಲಿ ನಡೆಯುವ ಕೋಳಿ ಅಂಕಗಳಿಗೆ ಜಿಲ್ಲಾಡಳಿತ ಕಠಿಣ ನಿಯಮಾವಳಿ ರೂಪಿಸಿ ಆಚರಣೆಗೆ ಅನನುಕೂಲತೆ ಉಂಟಾಗಿರುವ ಬಗ್ಗೆ ಶಾಸಕ ಯಶಪಾಲ್ ಸುವರ್ಣ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಧಾರ್ಮಿಕ ಆಚರಣೆಗೆ ಅವಕಾಶ ನೀಡುವ ಭರವಸೆ ನೀಡಿದರು.