
ಫೆ.28ರಿಂದ ಮಾ.7: ಪುತ್ತಿಗೆಯಲ್ಲಿ ಬ್ರಹ್ಮಕಲಶೋತ್ಸವ
Friday, February 28, 2025
ಲೋಕಬಂಧು ನ್ಯೂಸ್
ಮೂಡುಬಿದಿರೆ, ಫೆ.27: ಸುಮಾರು 800 ವರ್ಷಗಳ ಇತಿಹಾಸವಿರುವ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆಬ್ರವರಿ 28ರಿಂದ ಮಾರ್ಚ್ 7ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶ್ರೀಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಲದೀಪ ಎಂ. ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ದೇವಳದ ಸಮಗ್ರ ಅಭಿವೃದ್ಧಿ ಕೆಲಸಗಳಾಗಿವೆ. ದಿನಂಪ್ರತಿ ಕೆಲಸ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಈ ಪರಿಸರದ ಜನತೆ, ಭಕ್ತರು ಶ್ರಮಿಸುತ್ತಿದ್ದಾರೆ. ಸಂಪೂರ್ಣ ಜೀರ್ಣೋದ್ಧಾರಗೊಂಡು ದೇವಸ್ಥಾನದಲ್ಲಿ ಎಂಟು ದಿನಗಳ ಕಾಲ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯಲಿದೆ ಎಂದವರು ತಿಳಿಸಿದರು.
ಈಗಾಗಲೇ ಮೂರು ಕಡೆಗಳಲ್ಲಿ ಪ್ರಮುಖ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗಿದೆ. ಎರಡು ಸಾವಿರ ವಾಹನಗಳ ಪಾರ್ಕಿಂಗ್'ಗೆ ವಿಶಾಲ ಜಾಗದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 30 ಸಾವಿರದಷ್ಟು ಆಹ್ವಾನ ಪತ್ರಿಕೆ ಹಂಚಲಾಗಿದ್ದು , ಹದಿನೆಂಟು ಮಾಗಣೆಗಳ ಎಪ್ಪತ್ತೇಳು ಗ್ರಾಮಗಳ ಸಹಿತ ಸುಮಾರು ಒಂದೂವರೆ ಲಕ್ಷದಷ್ಟು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಹೊರೆಕಾಣಿಕೆ
ಫೆ.28ರಂದು ಅಪರಾಹ್ನ 2 ಗಂಟೆಯಿಂದ ಚೌಟರ ಅರಮನೆಯಿಂದ ಕನ್ನಡ ಭವನದ ವರೆಗೆ ಹಸಿರು ಹೊರೆಕಾಣಿಕೆ ಭವ್ಯ ಮೆರವಣಿಗೆಯಲ್ಲಿ ಸಾಗಲಿದ್ದು, ಬಳಿಕ ನೆಲ್ಲಿಗುಡ್ಡೆಯಿಂದ ಪಾದಯಾತ್ರೆ ಮೂಲಕ ದೇವಳ ತಲುಪಲಿದೆ ಎಂದರು.
ದೇವಸ್ಥಾನದ ಇತಿಹಾಸ, ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಾಧ್ಯಕ್ಷ ನೀಲೇಶ್ ಶೆಟ್ಟಿ ಪುತ್ತಿಗೆಗುತ್ತು ಕೊಲಕಾಡಿ, ಕೋಶಾಧಿಕಾರಿ ಕೆ.ಶ್ರೀಪತಿ ಭಟ್, ಕಾರ್ಯದರ್ಶಿಗಳಾದ ವಿದ್ಯಾ ರಮೇಶ್ ಭಟ್ ಮತ್ತು ವಾದಿರಾಜ ಮಡ್ಮಣ್ಣಾಯ, ಉಪಾಧ್ಯಕ್ಷರಾದ ಬಾಹುಬಲಿ ಪ್ರಸಾದ್ ಮತ್ತು ಕುಂಗೂರು ಚಾವಡಿ ಮನೆ ಶಿವಪ್ರಸಾದ್ ಆಚಾರ್ಯ ಮೊದಲಾದವರಿದ್ದರು.