ಆರೋಗ್ಯಕರ ಆಹಾರ ನೀಡುವ ತಾಕತ್ತಿರುವುದು ಭಾರತಕ್ಕೆ ಮಾತ್ರ
Saturday, February 22, 2025
ಲೋಕಬಂಧು ನ್ಯೂಸ್
ಉಡುಪಿ, ಫೆ.22: ಭಾರತೀಯ ಆಹಾರ ಪದ್ಧತಿ ಆರೋಗ್ಯಪೂರ್ಣವಾಗಿದೆ ಎಂಬುದನ್ನು ಜಗತ್ತು ಒಪ್ಪಿಕೊಂಡಿದೆ. ಜಗತ್ತಿಗೆ ಆರೋಗ್ಯಕರ ಆಹಾರ ನೀಡುವ ಯೋಗ್ಯತೆ ಮತ್ತು ತಾಕತ್ತು ಇರುವುದು ಭಾರತಕ್ಕೆ ಮಾತ್ರ. ನಮ್ಮ ಸಾಂಪ್ರದಾಯಿಕ ಅಡುಗೆಗಳಲ್ಲಿಯೂ ಆರೋಗ್ಯದ ಪರಿಕಲ್ಪನೆ ಇದೆ. ಆಹಾರವೇ ಔಷಧ ಎಂಬ ಮಾತಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕದಂಬ ಸಮೂಹ ಸಂಸ್ಥೆ ಮುಖ್ಯಸ್ಥ ಅನಂತಕುಮಾರ ಹೆಗಡೆ ಹೇಳಿದರು.ಶನಿವಾರ ಎಂಜಿಎಂ ಕಾಲೇಜು ಆವರಣದಲ್ಲಿ ಸಮತ್ವ ಮತ್ತು ಸದ್ಗುರು ಸೌಹಾರ್ದ ಸಹಕಾರಿ, ನಮ್ಮವರ ಬಜಾರ್, ವಿಪ್ರ ಬಿಸಿನೆಸ್ ಫೋರಮ್ ಮತ್ತು ಬ್ರಾಂಡ್'ಮ್ಯಾನ್ ಡಿಇಸಿಎ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನಗಳ ಆಹಾರ, ಆರೋಗ್ಯ ಮತ್ತು ಹಣಕಾಸು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವ ಜನರಲ್ಲಿರುವ ಸೀಮಿತ ದೃಷ್ಟಿಕೋನ ನಿರುದ್ಯೋಗ ಸಮಸ್ಯೆಗೆ ಮೂಲ ಕಾರಣ. ಅದಕ್ಕೆ ಸರ್ಕಾರ ಹೊಣೆಯಲ್ಲ. ಉದ್ಯೋಗ ಸಿಕ್ಕಿದರೆ ಸಾಕು ಎಂಬ ಪ್ರವೃತ್ತಿಯಿಂದ ಮಹತ್ವಾಕಾಂಕ್ಷೆ ನಶಿಸಿ ಹೋಗುತ್ತಿದೆ.
ಆಹಾರವೂ ಉದ್ಯಮವಾಗಿ ಬೆಳೆದಿದೆ. ಮುಂದಿನ ತಲೆಮಾರಿನ ಆಹಾರೋದ್ಯಮ ಹೇಗಿರುತ್ತದೆ ಎಂಬ ಪರಿಕಲ್ಪನೆ ಅಗತ್ಯ 50 ವರ್ಷದ ಮುಂದಾಲೋಚನೆಯಿಂದ ಕಾರ್ಯಪ್ರವೃತ್ತರಾದವರು ಯಶಸ್ಸು ಕಾಣುತ್ತಾರೆ ಎಂದರು.
ಕರ್ಣಾಟಕ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಗೋಪಾಲಕೃಷ್ಣ ಸಾಮಗ ಮತ್ತು ಬೆಂಗಳೂರಿನ ಇಂಡಿಯಾ ಸ್ವೀಟ್ ಹೌಸ್ನ ಸಂಸ್ಥಾಪಕ ವಿಶ್ವನಾಥ್ ಭಟ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಮುಖ್ಯ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ ಸದ್ಗುರು ಸಂಸ್ಥೆಯ ಮೊಬೈಲ್ ಆ್ಯಪ್ ಮತ್ತು 'ಹಲೋ ಉಡುಪಿ' ಸ್ಮರಣ ಸಂಚಿಕೆ ಅನಾವರಣ ಮಾಡಲಾಯಿತು.
ಸದ್ಗುರು ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷ ಡಾ.ಬಿ.ಎನ್. ಶಾಂತಪ್ರಿಯ ಸ್ವಾಗತಿಸಿದರು. ಶ್ರೀನಿವಾಸ ಐತಾಳ್ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಅತಿಥಿಗಳನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಹಾರ, ಆರೋಗ್ಯ ಮತ್ತು ಜೀವನ ಶೈಲಿ ಹಾಗೂ ಸುಸ್ಥಿರ ಹಣಕಾಸು ನಿರ್ವಹಣೆ ಕುರಿತು ಗೋಷ್ಠಿಗಳು ನಡೆದವು.