ಅಂತರ ಧರ್ಮೀಯ ವಿವಾಹದಿಂದ ಹಿಂದುತ್ವಕ್ಕೆ ಧಕ್ಕೆಯಾಗದೇ: ಚಕ್ರವರ್ತಿಗೆ ಕಾಂಚನ್ ಪ್ರಶ್ನೆ
Wednesday, March 12, 2025
ಲೋಕಬಂಧು ನ್ಯೂಸ್
ಉಡುಪಿ: ಸ್ವಯಂಘೋಷಿತ ಹಿಂದೂ ಮುಖಂಡರಾಗಿ ದ್ವೇಷಪೂರಿತ ಭಾಷಣದ ಮೂಲಕ ಐಷಾರಾಮಿ ಜೀವನ ನಡೆಸುತ್ತಿರುವ ಚಕ್ರವರ್ತಿ ಸೂಲಿಬೆಲೆ ಮಂಗಳೂರಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅನ್ಯಧರ್ಮದ ಹುಡುಗಿಯರನ್ನು ಪ್ರೀತಿಸಿ ವಿವಾಹವಾಗಿ ಎಂದು ನೀಡಿರುವ ಕರೆಯಂತೆ ಹಿಂದೂ ಯುವಕರು ನಡೆದುಕೊಂಡರೆ ಹಿಂದುತ್ವಕ್ಕೆ ಧಕ್ಕೆಯಾಗುವುದಿಲ್ಲವೇ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ.ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದಿನವಿಡೀ ಅನ್ಯಧರ್ಮೀಯರನ್ನು ದೂಷಿಸುವವರು, ಅವರ ವಿರುದ್ಧ ದ್ವೇಷ ಮೂಡಿಸುವವರು ಅನ್ಯಧರ್ಮೀಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಕರೆ ನೀಡಿರುವುದು ಹಾಸ್ಯಾಸ್ಪದವಾಗಿದೆ.
ಮದುವೆಗೆ ಮುಂಚಿತವಾಗಿ ಬದುಕು ಕಟ್ಟಿಕೊಳ್ಳಲು ವಿದ್ಯೆ, ಉತ್ತಮ ಉದ್ಯೋಗ ಪಡೆಯಲು ಯಾವತ್ತು ಸಲಹೆ ನೀಡದೇ ಹಿಂದುಳಿದ ವರ್ಗದ ಹಿಂದೂ ಯುವಕರ ರಕ್ತ ಬಿಸಿಯಾಗಿಸಿ ಅವರಲ್ಲಿ ದ್ವೇಷ ಮನೋಭಾವನೆ ಮೂಡಿಸಿ, ಅವರ ದಾರಿ ತಪ್ಪಿಸಿ ಜೈಲು ಸೇರುವಂತೆ, ಇನ್ನು ಹಲವಾರು ಮಂದಿ ಹತ್ತಾರು ಪ್ರಕರಣಗಳಲ್ಲಿ ಸಿಲುಕಿಕೊಳ್ಳುವಂತೆ ಮಾಡಿ ಇದೀಗ ಅಂತರ ಧರ್ಮೀಯ ವಿವಾಹಕ್ಕೆ ಕರೆ ಕೊಡಲು ಇಂಥವರಿಗೆ ಯಾವ ನೈತಿಕತೆ ಇದೆ ಎಂದು ಕಾಂಚನ್ ಪ್ರಶ್ನಿಸಿದ್ದಾರೆ.
ಮಾನವೀಯತೆಯ ವಿರೋಧಿಯಾಗಿರುವ ಸೂಲಿಬೆಲೆಯವರ ಅಸಂಬದ್ಧ ಸಂದೇಶವನ್ನು ಕಟುವಾಗಿ ಟೀಕಿಸಿರುವ ರಮೇಶ್ ಕಾಂಚನ್, ಇನ್ನಾದರೂ ಎಲ್ಲರೂ ನಮ್ಮವರು ಎಂದು ಭಾವಿಸಿ, ಶಾಂತಿ ಸೌಹಾರ್ದತೆಯ ಸಮಾಜ ಕಟ್ಟುವಲ್ಲಿ ತೊಡಗಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.