
ಪ್ರಚೋದನಕಾರಿ ಭಾಷಣ: ಪ್ರಮೋದ್ ಮಧ್ವರಾಜ್ ವಿರುದ್ಧ ಸುಮೊಟೋ ಕೇಸ್
Saturday, March 22, 2025
ಲೋಕಬಂಧು ನ್ಯೂಸ್
ಉಡುಪಿ: ಮಲ್ಪೆ ಬಂದರಿನಲ್ಲಿ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಸಾರ್ವಜನಿಕರಿಗೆ ಅಪರಾಧ ಮಾಡಿಸಲು ಪ್ರೇರಣೆ ಮಾಡುತ್ತಾ, ದ್ವೇಷ ಭಾವನೆಯಿಂದ ಭಾಷಣ ಮಾಡಿ ಅಲ್ಲಿದ್ದವರನ್ನು ಪ್ರಚೋದಿಸುತ್ತಾ ಉದ್ರೇಕ ಭಾಷಣ ಮಾಡಿದ್ದಾರೆಂದು ಆರೋಪಿಸಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಮಲ್ಪೆ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, "ನಮ್ಮ ಮನೆಗೆ ಕಳ್ಳರು ಬಂದರೆ ನಾವು ಏನು ಮಾಡುತ್ತೇವೆ? ಪೊಲೀಸರು ಬರುವುದಕ್ಕೆ 5-6 ಗಂಟೆ ತಡವಾದರೆ ನಾವು ಏನು ಮಾಡುತ್ತೇವೆ? ಕಟ್ಟಿ ಹಾಕಲೇಬೇಕು. ಕಳ್ಳರನ್ನು ಕಟ್ಟಿ ಹಾಕಲೇ ಲಬೇಕು, ಮತ್ತೇನು ಮಾಡಲಿಕ್ಕೆ ಆಗುತ್ತೆ? ಏನು ಅವರಿಗೆ ಏಟು ಎಂದರೆ ಮಚ್ಚಿನಲ್ಲಿ, ಖಡ್ಗದಲ್ಲಿ, ತಲವಾರಿನಲ್ಲಿ ಹೊಡೆದದ್ದಾ? ಕೆನ್ನೆಗೆ ಎರಡು ಬಾರಿಸಿದ್ದು, ಯಾರಿಗೆ? ಕಳ್ಳ ಅಂತ ಆರೋಪಿತ ಒಂದು ವ್ಯಕ್ತಿಗೆ. ಆ ಮಹಿಳೆಯದ್ದು ಏನಾದರೂ ಆಕ್ಷೇಪ ಉಂಟಾ?' ಎಂದು ಮಹಿಳೆಗೆ ಸಾರ್ವಜನಿಕವಾಗಿ ಕಟ್ಟಿ ಹಾಕಿ ಹೊಡೆದ್ದನ್ನು ಸಮರ್ಥಿಸಿಕೊಂಡಿದ್ದರು.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.