
Udupi: ಕೋಳಿ ಅಂಕದ ಬಗ್ಗೆ ಅವಹೇಳನಕಾರಿ ಹೇಳಿಕೆ: ಕ್ಷಮೆ ಯಾಚನೆಗೆ ಪಟ್ಟು
Friday, July 25, 2025
ಲೋಕಬಂಧು ನ್ಯೂಸ್, ಉಡುಪಿ
ತುಳುನಾಡಿನ ದೈವಾರಾಧನೆಯ ಭಾಗವಾದ ಕೋಳಿ ಅಂಕ ಆಚರಣೆ ಬಗ್ಗೆ ಕಾಂಗ್ರೆಸ್ ಮುಖಂಡ ಪ್ರಸಾದರಾಜ್ ಕಾಂಚನ್ ಅವಹೇಳನಕಾರಿ ಹೇಳಿಕೆ ನೀಡಿದ್ದು, ತುಳುನಾಡಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅದಕ್ಕಾಗಿ ಅವರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ತುಳುನಾಡ ಧರ್ಮ ಜಾಗರಣ ವೇದಿಕೆ ಆಗ್ರಹಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾ ಪ್ರಮುಖ ಸಂಚಾಲಕ ಉದಯಕುಮಾರ್ ಹಿರಿಯಡ್ಕ, ಕಳೆದ ಮಂಗಳವಾರ ಬ್ರಹ್ಮಾವರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಪ್ರಸಾದರಾಜ್ ಕಾಂಚನ್ ಸ್ಥಳೀಯ ಶಾಸಕ ಯಶಪಾಲ್ ಸುವರ್ಣ ಅವರನ್ನು ಟೀಕಿಸುವ ವೇಳೆ ಉಡುಪಿಯ ಶಾಸಕರು ತುಳುನಾಡಿನ ಧಾರ್ಮಿಕ ಆಚರಣೆಯ ಭಾಗವಾದ ಸಾಂಪ್ರದಾಯಿಕ ಕೋಳಿ ಅಂಕ ಆಚರಣೆಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ಉಡುಪಿ ಜಿಲ್ಲೆಗೆ ಅವಮಾನ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.
ಪ್ರಸಾದರಾಜ್ ಕಾಂಚನ್ ತನ್ನ ಹೇಳಿಕೆ ಮೂಲಕ ತುಳುನಾಡಿನ ದೈವಾರಾಧನೆಯ ಚೌಕಟ್ಟಿನ ರಕ್ತಾಹಾರದ ಕಲ್ಪನೆಯಲ್ಲಿ ಅನಾದಿಕಾಲದಿಂದಲೂ ನಡೆಸಿಕೊಂಡು ಬಂದಿರುವ ಕೋಳಿ ಅಂಕ ಒಂದು ಜೂಜು ಎಂಬಂತೆ ಬಿಂಬಿಸಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.
ತುಳುನಾಡಿನ ಧಾರ್ಮಿಕ ಕೇಂದ್ರಗಳಾದ ದೈವಸ್ಥಾನ, ಗರೋಡಿ, ದೇವಸ್ಥಾನಗಳ ವಾರ್ಷಿಕ ಉತ್ಸವದ ಬಳಿಕ ದೈವಾರಾಧನೆಯ ಭಾಗವಾಗಿ ಕೋಳಿ ಅಂಕ ನಡೆದುಕೊಂಡು ಬರುತ್ತಿದೆ. ಅದು ಕೇವಲ ಕಳೆದ 2 ವರ್ಷಗಳಿಂದ ಪ್ರಾರಂಭ ಮಾಡಿದ್ದಲ್ಲ ಎನ್ನುವುದನ್ನು ಪ್ರಸಾದರಾಜ್ ಕಾಂಚನ್ ಮರೆತಂತಿದೆ.
ಉಡುಪಿ ಶಾಸಕರು ಸ್ಥಳೀಯ ಪ್ರತಿನಿಧಿಯಾಗಿ ವಿವಿಧ ದೈವಸ್ಥಾನ, ಗರೋಡಿ, ದೇವಸ್ಥಾನಗಳ ಪ್ರಮುಖರು ತಮ್ಮ ಕೋಳಿ ಅಂಕ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿದಾಗ ಓರ್ವ ಜವಾಬ್ದಾರಿಯುತ ಶಾಸಕನಾಗಿ ಕಾನೂನಾತ್ಮಕವಾಗಿ ಜೂಜು ರಹಿತ ಕೋಳಿ ಅಂಕ ನಡೆಸಲು ಅವಕಾಶ ನೀಡುವಂತೆ ವಿಧಾನಸೌಧದಲ್ಲಿ ಪ್ರಸ್ತಾಪಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಪುತ್ತೂರಿನ ಕಾಂಗ್ರೆಸ್ ಶಾಸಕ ಆಶೋಕ್ ರೈ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಪಕ್ಷಾತೀತವಾಗಿ ಸಹಮತ ಸೂಚಿಸಿದ್ದರೂ ಪ್ರಸಾದರಾಜ್ ಕಾಂಚನ್ ಮಾತ್ರ ನಮ್ಮ ಈ ಸಾಂಪ್ರದಾಯಿಕ ಆಚರಣೆಯನ್ನು ಅವಮಾನಕಾರಿ ಎಂಬಂತೆ ಹೇಳುತ್ತಿರುವುದು ದುರ್ದೈವದ ಸಂಗತಿ.
ಪ್ರಸಾದರಾಜ್ ಕಾಂಚನ್ ಅವರ ಈ ಅಪ್ರಬುದ್ಧ ಅವಹೇಳನಕಾರಿ ಹೇಳಿಕೆಯಿಂದ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದ್ದು, ತಕ್ಷಣ ತನ್ನ ಹೇಳಿಕೆಯನ್ನು ಹಿಂಪಡೆದು ಬೇಷರತ್ತಾಗಿ ಕ್ಷಮೆ ಯಾಚಿಸಬೇಕು ಎಂದು ಉದಯ ಕುಮಾರ್ ಒತ್ತಾಯಿಸಿದ್ದಾರೆ.
ತುಳುನಾಡಿನ ಧಾರ್ಮಿಕ ಆಚರಣೆ ಬಗ್ಗೆ ಹೇಳಿಕೆ ನೀಡುವಾಗ ಇನ್ನಾದರೂ ಜಾಗ್ರತೆ ವಹಿಸಲಿ. ಇದೇ ಪ್ರವೃತ್ತಿ ಮುಂದುವರಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ತುಳುನಾಡು ಧರ್ಮ ಜಾಗೃತಿ ವೇದಿಕೆಯ ಮಂಗಳೂರು ಪ್ರಮುಖ ಸಂಚಾಲಕ ಧರ್ಮೇಂದ್ರ ಎಂ.ಪಿ., ಉಡುಪಿ ಜಿಲ್ಲಾ ಸಹಸಂಚಾಲಕ ಅರುಣ್ ಕುಮಾರ್, ಸಂಘಟನಾ ಸಂಚಾಲಕ ಶರತ್ ಕೆಮ್ಮಣ್ಣು ಸುದ್ದಿಗೋಷ್ಟಿಯಲ್ಲಿದ್ದರು.