KSRTC ಬಸ್ ಮುಷ್ಕರ ಗ್ಯಾರಂಟಿ
Tuesday, August 5, 2025
ಲೋಕಬಂಧು ನ್ಯೂಸ್, ಬೆಂಗಳೂರು
ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ತಿಳಿಸಿದ್ದಾರೆ.ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮುಷ್ಕರ ಮುಂದೂಡಿಕೆಯಾಗಿಲ್ಲ, ನಾಳೆಯಿಂದ ಬಸ್ಗಳು ರಸ್ತೆಗೆ ಇಳಿಯುವುದಿಲ್ಲ ಎಂದವರು ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಎಲ್ಲಾ ಬಸ್ಗಳನ್ನು ಡಿಪೋದಲ್ಲಿ ನಿಲ್ಲಿಸುತ್ತೇವೆ. ಯಾವುದೇ ನೌಕರರು ಬಸ್ಗಳನ್ನು ಓಡಿಸುವುದಿಲ್ಲ. ಸರ್ಕಾರದ ಬೆದರಿಕೆಗೆ ಹೆದರಬೇಡಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಎಂದು ಸಾರಿಗೆ ನೌಕರರಿಗೆ ಅವರು ಕಿವಿಮಾತು ಹೇಳಿರುವುದಾಗಿ ತಿಳಿಸಿದರು.
ಕೋರ್ಟ್ ಆದೇಶದ ಕುರಿತು ಮಾತನಾಡಿರುವ ಅವರು, ಆದೇಶ ನಮಗೆ ತಲುಪಿದೆ. ಆದರೆ, ಆದೇಶದಲ್ಲೇನಿದೆ ಎನ್ನುವುದು ಗೊತ್ತಿಲ್ಲ. ನಿಗದಿಯಾದಂತೆ ನಮ್ಮ ಮುಷ್ಕರ ಆರಂಭವಾಗುತ್ತದೆ. ವಕೀಲರ ಜೊತೆ ಚರ್ಚಿಸಿ ನಮ್ಮ ಜಂಟಿಕ್ರಿಯಾ ಸಮಿತಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಮುಷ್ಕರ ಕುರಿತಂತೆ 22 ದಿನಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆ.4ರಂದು ಸಭೆ ಕರೆದಿದ್ದು 38 ತಿಂಗಳ ಬಾಕಿ ಹಣ ಕೊಡಬೇಕು, ಶೇ.15ರಷ್ಟು ವೇತನ ಹೆಚ್ಚಿಸಬೇಕು. ಬೇಕಿದ್ದರೆ ಕಂತಿನ ರೂಪದಲ್ಲಿ ಬಾಕಿ ಹಣ ಕೊಡಿ ಎಂದು ಮನವಿ ಮಾಡಲಾಗಿತ್ತು.
ನಾವು ಕೇಳಿದ್ದ 12 ಬೇಡಿಕೆಗಳ ಪೈಕಿ ಕನಿಷ್ಠ 2 ಪ್ರಮುಖ ಬೇಡಿಕೆಯನ್ನಾದರೂ ಈಡೇರಿಸಬೇಕಿತ್ತು. ಅದನ್ನೂ ಈಡೇರಿಸಲಿಲ್ಲ. ಅಧಿವೇಶನದ ವರೆಗೆ ಮುಷ್ಕರ ಮುಂದೂಡಲು ತಿಳಿಸಿದರು. ಆದರೆ, ನಾವು ಮುಂದೂಡಲು ಒಪ್ಪಿಗೆ ಸೂಚಿಸಿಲ್ಲ. ಹಾಗಾಗಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮುಷ್ಕರದಲ್ಲಿ ಭಾಗವಹಿಸದಿರಲು ಮನವಿ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆಯಾಗಿರುವುದರಿಂದ ಸಾರಿಗೆ ಮುಷ್ಕರದಲ್ಲಿ ಸಂಸ್ಥೆ ನೌಕರರು ಪಾಲ್ಗೊಳ್ಳಬಾರದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಿಯಾಂಕಾ ಎಂ. ಮನವಿ ಮಾಡಿದ್ದಾರೆ.
ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು. ಹಾಗೂ ಈಗಾಗಲೇ ಮುಖ್ಯಮಂತ್ರಿಯೂ ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆಯಾಗಿರುವ ವಾ.ಕ.ರ ಸಾರಿಗೆ ಸಂಸ್ಥೆ ನೌಕರರ ಮುಷ್ಕರದಲ್ಲಿ ಪಾಲ್ಗೊಳ್ಳಬಾರದೆಂದು ಮನವಿ ಮಾಡಿದ್ದಾರೆ.
ಸರ್ಕಾರದ ಪ್ರಯತ್ನ, ಹೈಕೋರ್ಟ್ ಚಾಟಿಯಿಂದಾಗಿ ಬಸ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದರಾದರೂ ನೌಕರರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಬಾಗಲಕೋಟೆಯ ಕಾರ್ಮಿಕ ಸಂಘಟನೆಗಳು ಹೇಳಿವೆ.
ಜಿಲ್ಲೆಯಲ್ಲಿ 8 ಡಿಪೋಗಳಿದ್ದು, 686 ಬಸ್ಗಳು ಸಂಚರಿಸುತ್ತವೆ. ಚಾಲಕರು, ನಿರ್ವಾಹಕರು ಸೇರಿ 2,098 ನೌಕರರಿದ್ದು, 48 ಗಂಟೆ ಮುಂಚಿತವಾಗಿಯೇ ಅವರ ರಜೆಗಳನ್ನು ರದ್ದುಪಡಿಸುವ ಜೊತೆಗೆ ಮುಷ್ಕರದಲ್ಲಿ ಪಾಲ್ಗೊಳ್ಳದೆ ನೌಕರಿಗೆ ಹಾಜರಾಗುವಂತೆ ಸೂಚಿಸಿ ಸಹಿ ಪಡೆಯಲಾಗಿದೆ.
ಆದರೆ, 38 ತಿಂಗಳ ಬಾಕಿ ವೇತನ, 2024ರ ಜನವರಿ ತಿಂಗಳಿನಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಹಾಗೂ ಕರ್ತವ್ಯದಿಂದ ವಜಾಗೊಳಿಸಿರುವವರನ್ನು ಮರಳಿ ಕೆಲಸಕ್ಕೆ ಪಡೆಯುವುದರ ಜೊತೆಗೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಸಂಚಾಲಕ ಬಿ.ವಿ. ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ.