
Udupi: ನಾರಾಯಣ ಗುರು ವೃತ್ತ ತೆರವು: ದಾರ್ಶನಿಕರ ಅಪಮಾನ
Sunday, August 31, 2025
ಲೋಕಬಂಧು ನ್ಯೂಸ್, ಉಡುಪಿ
ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬನ್ನಂಜೆಯ ನಾರಾಯಣ ಗುರು ಸಂಚಾರ ವೃತ್ತವನ್ನು ತೆರವುಗೊಳಿಸಿರುವುದನ್ನು ಖಂಡಿಸಿರುವ ಮಾಜಿ ಶಾಸಕ ಕೆ. ರಘುಪತಿ ಭಟ್, ನಾರಾಯಣ ಗುರು ಹೆಸರಿನ ಸಂಚಾರ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮಫಲಕದ ಸಂಚಾರ ವೃತ್ತ ನಿಲ್ಲಿಸಿ, ಅಲ್ಲಿದ್ದ ವೃತ್ತವನ್ನು ಪೊದೆಗಳಲ್ಲಿ ಬಿಸಾಡಿರುವುದು ಖಂಡನೀಯ. ಇದು ದಾರ್ಶನಿಕ ಮಹಾನ್ ಪುರುಷರಿಗೆ ಮಾಡಿದ ಮಹಾ ಅಪಮಾನ ಎಂದು ಹೇಳಿದ್ದಾರೆ.
ತನ್ನ ಶಾಸಕತ್ವದ ಅವಧಿಯಲ್ಲಿ ವಿಶೇಷ ಪ್ರಯತ್ನದ ಫಲವಾಗಿ ಬನ್ನಂಜೆ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಿ ಸರಕಾರ ಅನುಮತಿ ನೀಡಿ ಆದೇಶಿಸಿತ್ತು. ಆದರೆ, ಸರಕಾರದ ಆದೇಶವನ್ನು ಉಲ್ಲಂಘಿಸಿ ಸಂಚಾರ ವೃತ್ತ ತೆರವುಗೊಳಿಸಿ ಆ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮ ಫಲಕದ ಸಂಚಾರ ವೃತ್ತ ರಚಿಸಿದವರನ್ನು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭಟ್ ಒತ್ತಾಯಿಸಿದ್ದಾರೆ.
ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ನಾರಾಯಣ ಗುರು ಜಾತಿ ಪದ್ಧತಿಯ ಅನ್ಯಾಯಗಳ ವಿರುದ್ಧ ಹೋರಾಡಿ ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು. ಅವರ ಗೌರವದ ಪ್ರತೀಕವಾಗಿ ಬನ್ನಂಜೆ ವೃತ್ತವನ್ನು ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ನಿರ್ಣಯಿಸಲಾಗಿತ್ತು.
ನಾರಾಯಣ ಗುರು ಸಂಚಾರ ವೃತ್ತ ತೆರವುಗೊಳಿಸಿ ಆ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮಫಲಕದ ಸಂಚಾರ ವೃತ್ತ ರಚಿಸಿರುವುದು ತಪ್ಪು. ಇದು ಸರಕಾರದ ಆದೇಶದ ಉಲ್ಲಂಘನೆಯಾಗಿದೆ ಎಂದಿರುವ ರಘುಪತಿ ಭಟ್, ಬನ್ನಂಜೆ ವೃತ್ತದಲ್ಲಿ ನಗರಸಭೆ ವತಿಯಿಂದ ಸುಂದರವಾದ ನಾರಾಯಣ ಗುರು ವೃತ್ತ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದಾರೆ.