
Udupi: ಸೆ.13: ಬೃಹತ್ ಉದ್ಯೋಗ ಮೇಳ
Thursday, August 28, 2025
ಲೋಕಬಂಧು ನ್ಯೂಸ್, ಉಡುಪಿ
ನಗರಸಭೆ ಮತ್ತು ಶ್ರೀ ಜ್ಞಾನಜ್ಯೋತಿ ಭಜನಾ ಮಂದಿರ ಸುವರ್ಣ ಸಂಭ್ರಮ ಸಮಿತಿ ಮಲ್ಪೆ ಕಡಲತೀರ ಆಶ್ರಯದಲ್ಲಿ ಎಂಎಸ್/ಎಸ್ ಯಶಸ್ ಮ್ಯಾನೇಜ್ಮೆಂಟ್ ಸೊಲ್ಯೂಷನ್ ಪ್ರೆ.ಲಿ. ಬೆಂಗಳೂರು ಸಹಭಾಗಿತ್ವದಲ್ಲಿ ಶಾಸಕ ಯಶಪಾಲ್ ಸುವರ್ಣ ಮತ್ತು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಸಹಕಾರದೊಂದಿಗೆ ಬೃಹತ್ ಉದ್ಯೋಗ ಮೇಳ ಸೆ.13ರಂದು ಬೆಳಗ್ಗೆ 8.30ರಿಂದ ಸಂಜೆ 5ರ ವರೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ಯಶಪಾಲ್ ಸುವರ್ಣ, 100ಕ್ಕೂ ಅಧಿಕ ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದಾರೆ. 75 ಕೌಂಟರ್'ಗಳು ಇರಲಿದ್ದು, ಆನ್ಲೈನ್ ಮೂಲಕವೂ ನೋಂದಣಿ ಮಾಡಬಹುದು. ಬೆಳಗ್ಗೆ ಮತ್ತು ಸಂಜೆ ಉಪಾಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದರು.
ಈ ಹಿಂದೆ ನಗರಸಭೆ ವತಿಯಿಂದ ಬನ್ನಂಜೆಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ 1,410 ಮಂದಿಗೆ ಉದ್ಯೋಗ ಲಭಿಸಿದೆ ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.
ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಶ್ರೀ ಜ್ಞಾನ ಜ್ಯೋತಿ ಭಜನಾ ಮಂದಿರದ ಅಧ್ಯಕ್ಷ ಜ್ಞಾನೇಶ್ವರ ಕೋಟ್ಯಾನ್, ನಗರಸಭಾ ಸದಸ್ಯ ವಿಜಯ ಕುಮಾರ್ ಮೊದಲಾದವರಿದ್ದರು.