
Udupi: ಆ.4: ಕ್ರೈಸ್ತ ಧರ್ಮ ಭಗಿನಿಯರ ಬಂಧನ ಖಂಡಿಸಿ ಪ್ರತಿಭಟನೆ
Sunday, August 3, 2025
ಲೋಕಬಂಧು ನ್ಯೂಸ್, ಉಡುಪಿ
ಛತ್ತೀಸ್'ಘಡದಲ್ಲಿ ಕ್ರೈಸ್ತ ಧರ್ಮ ಭಗಿನಿಯರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ನೇತೃತ್ವದಲ್ಲಿ ಇತರ ಸಹಭಾಗಿ ಸಂಘಟನೆಗಳ ಸಹಕಾರದೊಂದಿಗೆ ಆಗಸ್ಟ್ 4ರಂದು ಅಪರಾಹ್ನ 4 ಗಂಟೆಗೆ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಛತ್ತೀಸ್'ಘಡದಲ್ಲಿ ಸಿಸ್ಟರ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ ಆಫ್ ಅಸ್ಸಿಸಿ ಸದಸ್ಯರಾದ ತಲಶ್ಶೇರಿಯ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಅಂಗಮಾಲಿಯ ಸಿಸ್ಟರ್ ಪ್ರೀತಿ ಮೇರಿ ಎಂಬಿಬ್ಬರು ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯರನ್ನು ಕೆಲವೊಂದು ಸಂಘಟನೆಗಳ ಸುಳ್ಳು ಆರೋಪಗಳ ಮೇಲೆ ಮಾನವ ಕಳ್ಳಸಾಗಣೆ ಮತ್ತು ಧಾರ್ಮಿಕ ಮತಾಂತರದ ಆರೋಪ ಹೊರಿಸಿ ಬಂಧಿಸಲಾಗಿದೆ.
ಬಂಧಿತ ಕ್ರೈಸ್ತ ಸನ್ಯಾಸಿನಿಯರು ಮಹಿಳೆಯರನ್ನು ಅವರ ಪೋಷಕರ ಒಪ್ಪಿಗೆ ಪತ್ರ ಪಡೆದು ಆಗ್ರಾದ ಕಾನ್ವೆಂಟ್'ಗಳಲ್ಲಿ ಮನೆ ಕೆಲಸಕ್ಕಾಗಿ ಕರೆದೊಯ್ಯುತ್ತಿದ್ದರು. ಆ ಬಗ್ಗೆ ಮಹಿಳೆಯರೂ ಹೇಳಿಕೆ ನೀಡಿದ್ದಾರೆ.
ಬಂಧಿತ ಸನ್ಯಾಸಿನಿಯರನ್ನು ಭೇಟಿ ಮಾಡಲು ಯಾವುದೇ ಚರ್ಚ್ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿಲ್ಲ. ಅಲ್ಲದೆ, ಯುವತಿಯರಿಗೆ ಅವರ ಹೇಳಿಕೆ ಬದಲಾಯಿಸುವಂತೆ ಒತ್ತಾಯಿಸಲಾಗಿದೆ. ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಕರೆದೊಯ್ಯಲಾಗುತ್ತಿದೆ ಎಂದು ಹೇಳುವಂತೆ ಒತ್ತಾಯಿಸಲಾಗಿದೆ ಎನ್ನಲಾಗುತ್ತಿದ್ದು, ಯಾವುದೇ ಬಲವಂತ ಅಥವಾ ಮತಾಂತರ ನಡೆದಿಲ್ಲ.
ದೇಶದ ವಿವಿಧೆಡೆ ಇತ್ತೀಚಿನ ವರ್ಷಗಳಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು ವಿವಿಧ ಸಂಘಟನೆಗಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳ ಮೇಲೆ ಸುಳ್ಳು ಆರೋಪ ಹೊರಿಸುವುದು ಸಾಮಾನ್ಯವಾಗಿದೆ.
ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳ ಬಗ್ಗೆ ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ರಕ್ಷಣೆ ಒದಗಿಸಬೇಕು. ದಶಕಗಳಿಂದ ದೇಶದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಧರ್ಮಭಗಿನಿಯರನ್ನು ನಡೆಸಿಕೊಂಡಿರುವ ರೀತಿ ನಾಗರಿಕ ಸಮಾಜ ಒಪ್ಪುವಂತದಲ್ಲ.
ಈಗಾಗಲೇ ಕ್ರೈಸ್ತರಿಂದ ಸಹಿ ಸಂಗ್ರಹ ಅಭಿಯಾನ ಕೈಗೊಂಡಿದ್ದು, ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗೆ ನೀಡಲಾಗುವುದು ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಪ್ರಕಟಣೆ ತಿಳಿಸಿದೆ.