Udupi: ರಕ್ತದಾನ ಸೌಹಾರ್ದಕ್ಕೆ ಪೂರಕ
Friday, August 1, 2025
ಲೋಕಬಂಧು ನ್ಯೂಸ್, ಉಡುಪಿ
ಜಾತಿ ಮತ ಧರ್ಮವನ್ನು ಮೀರಿ ಜೀವ ಉಳಿಸಲು ಅಗತ್ಯವಾದ ರಕ್ತದಾನ ಸೌಹಾರ್ದಕ್ಕೆ ಪೂರಕ ಎಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.ಇಲ್ಲಿನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ 12ನೇ ವಾರ್ಷಿಕೋತ್ಸವ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸಿವು ಮುಕ್ತ ಜಗತ್ತು ರೂಪಿಸುವ ಹಾದಿಯಲ್ಲಿ ಬಡವರಿಗೆ ನೆರವು ನೀಡುವ ಮಲಬಾರ್ ಗೋಲ್ಡ್ ಸಂಸ್ಥೆಯ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆ ಮುಖ್ಯಸ್ಥ ಹಫೀಝ್ ರೆಹಮಾನ್ ಮಾತನಾಡಿ, ಸಂಸ್ಥೆಯ ಲಾಭಾಂಶದಲ್ಲಿ ಶೇ. 5ರಷ್ಟು ಮೊತ್ತವನ್ನು ಮಲಬಾರ್ ಚಾರಿಟೆಬಲ್ ಟ್ರಸ್ಟ್ ಮೂಲಕ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನ, ಹಸಿವು ಮುಕ್ತ ಜಗತ್ತು, ಅಜ್ಜಿಮನೆ ಮೈಕ್ರೋ ಲರ್ನಿಂಗ್ ಸೆಂಟರ್ ಮೂಲಕ ದೇಶದಲ್ಲಿ 287 ಕೋಟಿ ರೂ. ಹಾಗೂ ಕರ್ನಾಟಕದಲ್ಲಿ 40.88 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದರು.
ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತ ನಿಧಿ ಮುಖ್ಯಸ್ಥೆ ಡಾ. ವೀಣಾಕುಮಾರಿ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸುರೇಂದ್ರ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರಾಂಕ್ಲಿ ಡಿ'ಸೋಜಾ ಮಾತನಾಡಿದರು.
ಒಟ್ಟು 118 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ರಕ್ತದಾನಿಗಳಿಗೆ ಅಭಿನಂದನೆ
ಈ ಸಂದರ್ಭದಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದ ದಿಶಾನ್ ಪೂಜಾರಿ, ಶಾಂತಾರಾಮ ಮೊಗವೀರ, ವಿನುತಾ ಕಿರಣ್, ಜಯರಾಜ್ ಸಾಲ್ಯಾನ್, ಅಬ್ದುಲ್ ಹಮೀದ್ ಉಚ್ಚಿಲ, ನಿತ್ಯಾನಂದ ಅಮೀನ್, ಚೇತು ಶಂಕರಪುರ, ಝಾಕಿರ್ ಹುಸೇನ್ ಮತ್ತು ಶ್ರೀನಿವಾಸ ಪ್ರಸಾದ್ ಮಯ್ಯ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಮುಸ್ತಫಾ, ಎ.ಕೆ. ಗುರುರಾಜ್, ತಂಝೀಮ್ ಶಿರ್ವ ಉಪಸ್ಥಿತರಿದ್ದರು.
ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.