-->
Udupi: ಒಗ್ಗಟ್ಟಿನಿಂದ ಸಹಕಾರಿ ಕ್ಷೇತ್ರದ ಉಳಿವು

Udupi: ಒಗ್ಗಟ್ಟಿನಿಂದ ಸಹಕಾರಿ ಕ್ಷೇತ್ರದ ಉಳಿವು

ಲೋಕಬಂಧು ನ್ಯೂಸ್, ಉಡುಪಿ
ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪತ್ತಿನ ಹಾಗೂ ಇತರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಶನಿವಾರ ಆಯೋಜಿಸಲಾದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉಡುಪಿ ಲಿಕೋ ಬ್ಯಾಂಕಿನ ಡೈಮಂಡ್ ಜ್ಯುಬಿಲಿ ಸಭಾಂಗಣದಲ್ಲಿ‌ ಉದ್ಘಾಟಿಸಿ ಮಾತನಾಡಿದರು.ಸಹಕಾರಿ ಕ್ಷೇತ್ರದ ಭವಿಷ್ಯ ರೂಪಿಸುವ ಕೆಲಸ ಜಿಲ್ಲೆಯ ಸಹಕಾರಿಗಳಿಂದ ಆಗುತ್ತಿರುವುದು ಹೆಮ್ಮೆಯ ಸಂಗತಿ. ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕ ಶಿಸ್ತು ತಂದು ಜನರ ವಿಶ್ವಾಸ ಗಳಿಸುವ‌ ಆಶಯದಿಂದ ಕೇಂದ್ರ ಸರಕಾರ ಮಹತ್ವದ ಕೆಲಸ ಮಾಡುತ್ತಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರುವ ಕೆಲಸ ಆಗುತ್ತಿದೆ.


ಸಹಕಾರಿಗಳು ಒಗ್ಗಟ್ಟಿನಿಂದ ಮುನ್ನಡೆಯುತ್ತಿರುವ ಕಾರಣದಿಂದ ಉಡುಪಿ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಸಾಕಷ್ಟು ಯಶಸ್ಸು ಕಾಣುತ್ತಿವೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸರಕಾರ ವಿಧಾನ ಪರಿಷತ್'ನಲ್ಲಿ ಮಂಡಿಸಿದ ಉದ್ದೇಶಿತ ತಿದ್ದುಪಡಿ ಠೇವಣಿ ವಿನಿಯೋಗ ಕುರಿತ ವಿಧೇಯಕ ಜಾರಿಗೆ ಬಂದರೆ ಸಹಕಾರಿ ಕ್ಷೇತ್ರಗಳ ಮೇಲಾಗುವ ಪರಿಣಾಮಗಳ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು. ಆದರೆ, ಸರಕಾರದ ನೀತಿಗಳ ಬಗ್ಗೆ ನಮಗೆ ಯಾವುದೇ ವಿರೋಧ ಇಲ್ಲ ಎಂದರು.


ಲಿಕೋ ಬ್ಯಾಂಕ್ ಅಧ್ಯಕ್ಷ ಕೃಷ್ಣ, ಉಡುಪಿ ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕೆದ್ಲಾಯ, ಯೂನಿಯನ್ ನಿರ್ದೇಶಕರಾದ ಎಚ್.ಗಂಗಾಧರ ಶೆಟ್ಟಿ, ಶ್ರೀಧರ್ ಪಿ.ಎಸ್., ಕೆ.ಸುರೇಶ್ ರಾವ್ ಉಪಸ್ಥಿತರಿದ್ದರು.


ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


ಶಿವಮೊಗ್ಗ ಸನ್ನದು ಲೆಕ್ಕಪರಿಶೋಧಕ ವರುಣ್ ಭಟ್‌ 'ಸಹಕಾರ ಕಾಯ್ದೆಯ ಪ್ರಮುಖ ಅಂಶಗಳು ಹಾಗೂ ಸಹಕಾರ ಸಂಸ್ಥೆಗಳಿಗೆ ಅನ್ವಯಿಸುವಂತೆ ಪ್ರೊಫೆಷನಲ್ ಟಾಕ್ಸ್' ಮತ್ತು ಬೆಂಗಳೂರು ಸನ್ನದು ಲೆಕ್ಕಪರಿಶೋಧಕ ಅನಿಲ್ ಭಾರದ್ವಾಜ್ 'ಸಹಕಾರ ಸಂಸ್ಥೆಗಳಿಗೆ ಅನ್ವಯಿಸುವಂತೆ ಜಿಎಸ್‌ಟಿ ತೆರಿಗೆ ಕಾನೂನುಗಳು, ಆದಾಯ ತೆರಿಗೆ ಕಾಯ್ದೆ ಅಂಶಗಳು ಹಾಗೂ ಅನುಪಾಲನ ಕ್ರಮಗಳು' ಕುರಿತು ಉಪನ್ಯಾಸ ನೀಡಿದರು.

Ads on article

Advertise in articles 1

advertising articles 2

Advertise under the article