Ujire: ಧರ್ಮಸ್ಥಳಕ್ಕೆ ಜನಪ್ರತಿನಿಧಿಗಳೊಂದಿಗೆ ಭಕ್ತರ ಭೇಟಿ
Tuesday, August 26, 2025
ಲೋಕಬಂಧು ನ್ಯೂಸ್, ಉಜಿರೆ
ದೇವರ ಅನುಗ್ರಹದಿಂದ ಸತ್ಯದ ಅನಾವರಣ ಆಗುತ್ತಿರುವುದು ಸಂತಸವಾಗಿದೆ. ಧರ್ಮಸ್ಥಳದ ಭಕ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳ ಶ್ರದ್ಧಾ ಭಕ್ತಿಯ ಪ್ರೋತ್ಸಾಹದಿಂದ ಎಲ್ಲಾ ಸೇವಾ ಕಾರ್ಯಗಳನ್ನು ಮುಂದುವರಿಸುವ ಉತ್ಸಾಹ ಮೂಡಿಬಂದಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಮಂಗಳೂರು, ಮೂಡುಬಿದಿರೆ, ಬಂಟ್ವಾಳ, ಸುರತ್ಕಲ್, ಉಳ್ಳಾಲ ಹಾಗೂ ಬೆಳ್ತಂಗಡಿ ತಾಲೂಕುಗಳಿಂದ ಸುಮಾರು 5 ಸಾವಿರ ಮಂದಿ ಭಕ್ತರು ಹಾಗೂ ಅಭಿಮಾನಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸೋಮವಾರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರಿಗೆ ಶ್ರದ್ಧಾ ಭಕ್ತಿಯಿಂದ ಗೌರವಾರ್ಪಣೆ ಮಾಡಿದರು.ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಎಲ್ಲರೂ ದೇವಸ್ಥಾನದ ಎದುರು ಸಾಮೂಹಿಕವಾಗಿ 'ಶಿವಪಂಚಾಕ್ಷರಿ ಪಠಣ' ಮಾಡಿದರು. ನಂತರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ಕುಮಾರ್ ಕಟೀಲು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಶಾಸಕರಾದ ಹರೀಶ್ ಪೂಂಜ, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯಕ್, ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಸತೀಶ್ ಕುಂಪಲ, ಹರಿಕೃಷ್ಣ ಬಂಟ್ವಾಳ, ಮೂಡಬಿದಿರೆ ಡಾ.ಎಂ. ಮೋಹನ ಆಳ್ವ, ಕೆ.ಪಿ. ಜಗದೀಶ್ ಅಧಿಕಾರಿ, ವಕೀಲ ಬಾಹುಬಲಿ ಪ್ರಸಾದ್, ಕೃಷ್ಣರಾಜ ಹೆಗ್ಡೆ ಮೊದಲಾದವರಿದ್ದರು.