Doddanagudde ರಮಾನಂದ ಗುರೂಜಿಗೆ ‘ರಾಷ್ಟ್ರೀಯ ಧಾರ್ಮಿಕ ರತ್ನ ಪ್ರಶಸ್ತಿ’ ಪ್ರದಾನ
Saturday, September 20, 2025
ಲೋಕಬಂಧು ನ್ಯೂಸ್, ಉಡುಪಿ
ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರಿಗೆ ಸುರ್ವೆ ಕಲ್ಚರಲ್ ಅಕಾಡೆಮಿ ನೀಡುವ ‘ರಾಷ್ಟ್ರೀಯ ಧಾರ್ಮಿಕ ರತ್ನ ಪ್ರಶಸ್ತಿ’ ಪ್ರದಾನ ಸಮಾರಂಭ ಶ್ರೀಕ್ಷೇತ್ರ ದೊಡ್ಡಣಗುಡ್ಡೆಯಲ್ಲಿ ನಡೆಯಿತು.ಪ್ರಶಸ್ತಿ ಪ್ರದಾನ ಮಾಡಿದ ಸುರ್ವೆ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ರಮೇಶ್ ಸುರ್ವೆ, ರಮಾನಂದ ಗುರೂಜಿ ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ವ್ಯಕ್ತಿಯೋರ್ವ ತನ್ನ ಕಠಿನ ಪ್ರಯತ್ನ, ನಿರಂತರ ಪರಿಶ್ರಮದ ಮೂಲಕ ಏನನ್ನೂ ಸಾಧಿಸಬಹುದು ಎಂಬುವುದಕ್ಕೆ ಗುರೂಜಿ ಜ್ವಲಂತ ಸಾಕ್ಷಿಯಾಗಿದ್ದಾರೆ.
ಅವರು ತನ್ನಲ್ಲಿಗೆ ಕಷ್ಟ ಪರಿಮಾರ್ಜನೆ ಮತ್ತು ಸಾಂತ್ವನ ಬಯಸಿ ಬರುವವರಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸಿದ್ದೇನೆ ಎಂದು ಹೇಳಿದವರಲ್ಲ. ಬದಲಾಗಿ ತಾಯಿ ದುರ್ಗಾ ಆದಿಶಕ್ತಿಯ ಪ್ರೇರಣೆಯಂತೆ ಸೇವೆ ಮಾಡಿದ್ದೇನೆ ಎಂದಷ್ಟೇ ಹೇಳುವ ಸರಳತೆ ಅವರದು ಎಂದರು.
ಗುರೂಜಿಯವರ 60ರ ಸಾಧನೆಯ ಹೊತ್ತಗೆ ಪ್ರಕಟಿಸುವ ಹಂಬಲ ವ್ಯಕ್ತಪಡಿಸಿದರು.
ಚಿತ್ರನಟಿ ಮೀನಾ, ಗುರೂಜಿ ಕೇವಲ ಸಂಕಷ್ಟಗಳಿಗೆ ಪರಿಹಾರ ದೊರಕಿಕೊಡುವುದಲ್ಲದೆ, ಕಂಗೆಟ್ಟವರಿಗೆ ಸಮರ್ಪಕ ಶಾಶ್ವತ ಪರಿಹಾರ ಸೂಚಿಸುತ್ತಾ ಬಂದಿದ್ದಾರೆ. ಕಳೆದ 15 ವರ್ಷಗಳಿಂದ ಹೆಜ್ಜೆ ಹೆಜ್ಜೆಗೂ ಗುರೂಜಿ ಮಾರ್ಗದರ್ಶನ ಪಡೆಯುತ್ತಿದ್ದೇನೆ ಎಂದರು.
ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಉಷಾ ರಮಾನಂದ, ಉದ್ಯಮಿಗಳಾದ ದೀಪಕ್ ಕುಮಾರ್ ಮತ್ತು ಆನಂದ ಬಾಯರಿ, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್, ಪ್ರಧಾನ ಅರ್ಚಕ ಅನೀಶ್ ಆಚಾರ್ಯ, ವಕೀಲರಾದ ಇ. ಬಾಲಸುಬ್ರಹ್ಮಣ್ಯ, ಶಿವಪ್ರಸಾದ್ ಹೆಗ್ಡೆ, ಪ್ರಸನ್ನ ಕುಮಾರ್ ಮೊದಲಾದವರಿದ್ದರು.