.jpg)
Udupi: ವಿಶ್ವಕರ್ಮರ ಪರಂಪರಾಗತ ಜ್ಞಾನ ಮುಂದಿನ ಪೀಳಿಗೆಗೆ ತಲುಪಲಿ
Thursday, September 18, 2025
ಲೋಕಬಂಧು ನ್ಯೂಸ್, ಉಡುಪಿ
ಸಾವಿರಾರು ವರ್ಷಗಳ ಹಿಂದೆ ತಂತ್ರಜ್ಞಾನವೇ ಇಲ್ಲದ ಕಾಲದಲ್ಲಿ ಇಡೀ ವಿಶ್ವವನ್ನು ತನ್ನ ಕೈಚಳಕದ ಮೂಲಕ ನಿರ್ಮಿಸಿ ಜಗತ್ತು, ಭಾರತದತ್ತ ತಿರುಗಿ ನೋಡುವಂತೆ ಮಾಡಿದ ವಿಶ್ವಕರ್ಮರ ಜ್ಞಾನವನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ನಡೆಯಬೇಕು ಎಂದು ಶಾಸಕ ಯಶಪಾಲ್ ಸುವರ್ಣ ಆಶಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್'ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ವಿಶ್ವಕರ್ಮ ಸಮಾಜದ ಶ್ರೇಯೋಭಿವೃದ್ಧಿಗಾಗಿ 18 ವಿವಿಧ ಕುಲ ಕಸುಬುಗಳನ್ನು ಒಂದೆಡೆ ಸೇರಿಸಿ ಪಿಎಂ-ವಿಶ್ವಕರ್ಮ ಯೋಜನೆ ಜಾರಿ ಮಾಡಲಾಗಿದೆ. ದೇಶದ ಪಾರಂಪರಿಕ ಕುಲ ಕಸುಬುಗಳಿಗೆ ಬಲ ತುಂಬುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆ ಎಂದರು.
ಕರಾವಳಿಯ ಅಭಿವೃದ್ಧಿಯಲ್ಲಿಯೂ ಈ ಸಮಾಜದ ಕೊಡುಗೆ ಬಹಳಷ್ಟಿದೆ. ಇಲ್ಲಿನ ದೇಗುಲಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ ಕಾರ್ಯಗಳಲ್ಲಿ ಸಮಾಜದ ಕರಕುಶಲತೆ ಎದ್ದುಕಾಣುತ್ತದೆ. ಜಿಲ್ಲೆಯ ಕುಶಲಕರ್ಮಿಗಳಿಗೆ ನ್ಯಾಯ ಒದಗಿಸಲು ಪ್ರಥಮ ಆದ್ಯತೆ ನೀಡುವ ಮೂಲಕ ಅವರ ಬದುಕು ಕಟ್ಟಲು ಎಲ್ಲರೂ ನೆರವಾಗಬೇಕು ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಶ್ವಕರ್ಮ ಅತ್ಯಂತ ಶ್ರೇಷ್ಠ ಮತ್ತು ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಜನಮಾನಸದಲ್ಲಿ ಅವರ ಬಗ್ಗೆ ವಿಶಿಷ್ಟ ನಂಬಿಕೆ ಇದೆ. ಶ್ರೀಕೃಷ್ಣನ ದ್ವಾರಕೆ ಸೇರಿದಂತೆ ಜಗತ್ತಿನ ಎಲ್ಲ ಅದ್ಭುತಗಳನ್ನು ವಿಶ್ವಕರ್ಮ ರಚನೆ ಮಾಡಿರುವ ಬಗ್ಗೆ ಪೌರಾಣಿಕ ಉಲ್ಲೇಖಗಳಿವೆ.
ಆಧುನಿಕತೆಯ ಭರಾಟೆಯಲ್ಲಿ ಅಕ್ಕಸಾಲಿಗ, ಕುಂಬಾರ, ಬಡಗಿ, ಮಡಿವಾಳ, ನೇಕಾರ ಸೇರಿದಂತೆ ಹಲವು ಕುಲ ಕಸುಬುಗಳು ಅಳಿವಿನತ್ತ ಸಾಗುತ್ತಿದ್ದು ಅವುಗಳ ಪುನಶ್ಚೇತನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶ್ವಕರ್ಮ ಯೋಜನೆ ಜಾರಿಗೊಳಿಸಿದ್ದು ಮುಂದಿನ ಜನಾಂಗವನ್ನು ಈ ಕ್ಷೇತ್ರಗಳತ್ತ ಆಕರ್ಷಿಸುವ ಕಾರ್ಯ ನಡೆಯುತ್ತಿದೆ ಎಂದರು.
ನಿಟ್ಟೆ ಆಪ್ಟ್ ಸಾಫ್ಟ್ ಟೆಕ್ನಾಲಜೀಸ್ ಸಂಸ್ಥಾಪಕ ಹರ್ಷವರ್ಧನ ನಿಟ್ಟೆ ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ನುರಿತ ಐವರು ಹಿರಿಯ ಕುಶಲಕರ್ಮಿಗಳನ್ನು ಸನ್ಮಾನಿಸಲಾಯಿತು.
ಸೆ.17 ರಿಂದ ಅ.2 ರವರೆಗೆ ಜಿಲ್ಲೆಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ನಡೆಯಲಿರುವ ಸ್ವಚ್ಛತಾ ಹೀ ಸೇವಾ ಪಾಕ್ಷಿಕದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕದ್ರೋಳ್ಳಿ, ಯೋಜನಾಧಿಕಾರಿ ಡಾ. ಉದಯ ಕುಮಾರ್ ಶೆಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ, ವಿಶ್ವಕರ್ಮ ಒಕ್ಕೂಟದ ಉಡುಪಿ ಮತ್ತು ದ.ಕ. ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ ಮೊದಲಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಡಾ.ಪ್ರತಿಮಾ ಜಯಪ್ರಕಾಶ್ ಆಚಾರ್ಯ ನಿರೂಪಿಸಿ, ವಂದಿಸಿದರು.