
Udupi: ವೋಟ್ ಚೋರ್ ವಿರುದ್ಧ ಲಕ್ಷ ಸಹಿ ಸಂಗ್ರಹ
Friday, September 19, 2025
ಲೋಕಬಂಧು ನ್ಯೂಸ್, ಉಡುಪಿ
ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ಮತಗಳ್ಳತನ ವಿರುದ್ಧದ ಆಂದೋಲನವನ್ನು ರಾಷ್ಟ್ರವ್ಯಾಪಿ ನಡೆಸಲುದ್ದೇಶಿಸಲಾಗಿದ್ದು, ಜಿಲ್ಲೆಯ ಎಲ್ಲಾ 1,111 ಬೂತುಗಳಿಂದ ಒಂದು ಲಕ್ಷ ಸಹಿ ಸಂಗ್ರಹಿಸಿ ಕೇಂದ್ರ ಸರ್ಕಾಕ್ಕೆ ಕಳಿಸಲಾಗುವುದು. ಕಳೆದ ಸೆ.15ರಿಂದ ಈ ಅಭಿಯಾನ ಆರಂಭವಾಗಿದ್ದು ಈ ತಿಂಗಳಾಂತ್ಯದ ವರೆಗೆ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಐವನ್ ಡಿ'ಸೋಜ ಹೇಳಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, `ವೋಟ್ ಚೋರ್ ಗದ್ದಿ ಚೋಡೋ '(ಮತಗಳ್ಳರು ಅಧಿಕಾರ ತ್ಯಜಿಸಿ) ಆಂದೋಲನಕ್ಕೆ ಉತ್ತಮ ಜನಸ್ಪಂದನ ಲಭಿಸುತ್ತಿದೆ. ಉಡುಪಿ ಜಿಲ್ಲಾ ಕಾಂಗ್ರೆಸ್ ಕೂಡಾ ಬೆಂಬಲ ನೀಡುತ್ತಿದೆ.
ಮತಗಳ್ಳತನ ವಿರುದ್ಧದ ಆಂದೋಲನ ಬಿಹಾರದಿಂದ ಆರಂಭಗೊಳ್ಳುತ್ತಿದ್ದು, ರಾಷ್ಟ್ರ ರಾಜಕಾರಣದ ಅನೇಕ ಬದಲಾವಣೆಗಳು ಬಿಹಾರದಿಂದಲೇ ಆರಂಭಗೊಂಡಿರುವುದು ಇತಿಹಾಸ. ಕರ್ನಾಟಕದ ಅಗಡಿ ಮತಕ್ಷೇತ್ರದಲ್ಲಿ ಮತ್ತು ಬೆಂಗಳೂರಿನಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಚುನಾವಣೆ ಆಯೋಗದ ಗಮನ ಸೆಳೆಯಲಾಗಿದೆ.
ಚುನಾವಣಾ ಆಯೋಗ ಇದನ್ನು ಧನಾತ್ಮಕವಾಗಿ ಸ್ವೀಕರಿಸಬೇಕು. ಅದು ಬಿಟ್ಟು ರಾಹುಲ್ ಗಾಂಧಿ ಅವರಿಗೆ ಈ ಬಗ್ಗೆ ದಾಖಲೆ ನೀಡಿ ಅಥವಾ ಅಫಿದಾವಿತ್ ಸಲ್ಲಿಸಿ ಎಂದು ಹೇಳುವುದು ಸರಿಯಲ್ಲ. ಮತಗಳ್ಳತನವನ್ನು ರಾಜಕೀಯ ದೃಷ್ಟಿಯಿಂದ ನೋಡಕೂಡದು ಎಂದರು.
ಮುಂಬರುವ ಡಿಸೆಂಬರ್ ವೇಳೆಗೆ ಜಿ.ಪಂ., ತಾ.ಪಂ. ಚುನಾವಣೆ ನಡೆಯಲಿದ್ದು, ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕೋರ್ ಸಮಿತಿ ರಚಿಸಲಾಗಿದ್ದು, ಅದರಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದವರು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಪಕ್ಷ ಪ್ರಮುಖರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಪ್ರಸಾದರಾಜ್ ಕಾಂಚನ್, ದಿನೇಶ ಹೆಗ್ಡೆ ಮೊಳಹಳ್ಳಿ, ಎಸ್. ರಾಜು ಪೂಜಾರಿ, ಅಣ್ಣಯ್ಯ ಶೇರಿಗಾರ್ ಮೊದಲಾದವರಿದ್ದರು.