BJP: ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲೂ ಗೆಲುವು
Saturday, November 18, 2023
ಬೆಂಗಳೂರು, ನ.17 (ಲೋಕಬಂಧು ವಾರ್ತೆ): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಲೋಕಸಭಾ ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಲು ಶ್ರಮಿಸುವುದಾಗಿ ವಿಧಾನಸಭೆ ವಿರೋಧ ಪಕ್ಷದ ನೂತನ ನಾಯಕ, ಮಾಜಿ ಸಚಿವ ಆರ್. ಅಶೋಕ್ ಹೇಳಿದರು.ಶುಕ್ರವಾರ ಸಂಜೆವ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ನಮಗಿಂದು ಮೋದಿ, ನಡ್ಡಾ, ಅಮಿತ್ ಶಾ ಅವರಂಥ ಪ್ರಬಲ ನಾಯಕತ್ವ ಸಿಕ್ಕಿದೆ. ಕಳೆದ 6 ತಿಂಗಳ ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರ, ಸ್ವತಃ ಮುಖ್ಯಮಂತ್ರಿ ಮಗ ವರ್ಗಾವಣೆ ದಂಧೆಯಲ್ಲಿ ಪಾಲ್ಗೊಂಡಿರುವುದನ್ನು ಕಂಡು ಜನರೂ ಬೇಸತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ, ಕನಕಪುರ ಸೇರಿ ರಾಜ್ಯದ 28ಕ್ಕೆ 28 ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಕಳೆದ ಬಾರಿಯ 25 ಸ್ಥಾನಗಳ ಬದಲು 28 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ವಿಧಾನಸಭೆಯಲ್ಲಿ 66 ಶಾಸಕರು ವಿರೋಧ ಪಕ್ಷದ ನಾಯಕರಿಲ್ಲದೆ ಸಮರ್ಥ ವಿಪಕ್ಷವಾಗಿ ಕೆಲಸ ಮಾಡಿದ್ದೇವೆ. ಬಿಜೆಪಿ ಪ್ರಬಲ ಹೋರಾಟ ಮಾಡಿದೆ ಎಂದರು.
ಎಲ್ಲ ಹಿರಿಯರ ಕಿರಿಯರ ಸಹಕಾರ, ವಿಶ್ವಾಸದೊಂದಿಗೆ ಹೋರಾಟ ರೂಪಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ದುರಾಡಳಿತದ ವಿರುದ್ಧ ನಿರಂತರ ಹೋರಾಟ ಮಾಡುವುದಾಗಿ ಅವರು ಪ್ರಕಟಿಸಿದರು.
ಪಕ್ಷ ನನಗೆ ಸ್ಥಾನ ಕೊಟ್ಟಿದೆ. ಎಲ್ಲ ಶಾಸಕರನ್ನು ಪ್ರೀತಿ, ವಿಶ್ವಾಸದಿಂದ ಒಯ್ಯುವುದಾಗಿ ತಿಳಿಸಿದರು.
ಯಡಿಯೂರಪ್ಪ ಮಾರ್ಗದರ್ಶನದಡಿ ಮೋದಿ ಅವರ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಮಾದರಿಯಲ್ಲಿ ಮುನ್ನಡೆಯುವುದಾಗಿ ತಿಳಿಸಿದರು.
ಯಡಿಯೂರಪ್ಪ ವಿಪಕ್ಷ ನಾಯಕರಾಗಿ 34 ಜನ ಇದ್ದಾಗ, 79 ಜನರಿದ್ದರೂ ಕೆಲಸ ಮಾಡಿದ್ದರು. ಅವರ ಮಾರ್ಗದರ್ಶನ, ಬಸವರಾಜ ಬೊಮ್ಮಾಯಿ ಸಹಕಾರದೊಂದಿಗೆ ಮುನ್ನಡೆಯೋಣ ಎಂದು ತಿಳಿಸಿದರು.
ಸೋಲಿನ ಭಯ ಬಿಟ್ಟು, ಮತ್ತೆ ಸೂರ್ಯ ಉದಯಿಸುವ ಮತ್ತು ಮತ್ತೊಮ್ಮೆ ಕಮಲ ಅರಳುವ ವಿಶ್ವಾಸದೊಂದಿಗೆ ಹಾಗೂ ಘೋಷಣೆಯೊಂದಿಗೆ ಕೆಲಸ ಮಾಡಬೇಕಿದೆ ಎಂದು ಅಶೋಕ್ ತಿಳಿಸಿದರು.
ಲೋಕಸಭೆ, ಜಿಲ್ಲಾ ಪಂಚಾಯತಿ, ಬಿಬಿಎಂಪಿ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ತರುವ ಸವಾಲು ನಮ್ಮ ಎದುರಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ ಎಂದು ತಿಳಿಸಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದನ್ನು ನೆನಪಿಸಿಕೊಂಡ ಅವರು, ಅಯೋಧ್ಯೆ ವಿಚಾರದಲ್ಲೂ ಹೋರಾಟ ಮಾಡಿದ್ದಾಗಿ ತಿಳಿಸಿದರು. 45 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದನ್ನೂ ನೆನಪಿಸಿಕೊಂಡರು.
ಭ್ರಷ್ಟ ಕಾಂಗ್ರೆಸ್ ತೊಲಗಿಸಿ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಕಮಲ ಅರಳಿಸುವ ಸದುದ್ದೇಶದಿಂದ
ಮುನ್ನಡೆಯುವುದಾಗಿ ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದವರಿದ್ದರು.