.jpg)
Udupi:ಬೆಳೆಯುವ ಸಾಧನೆಯ ಚಿಂತನೆ ಮುಖ್ಯ
Thursday, November 23, 2023
ಉಡುಪಿ, ನ.23 (ಲೋಕಬಂಧು ವಾರ್ತೆ): ಅನ್ಯರನ್ನು ಸೋಲಿಸುವ ಗುರಿಗಿಂತ ನಾವು ಬೆಳೆಯಬೇಕೆನ್ನುವ ಸಾಧನೆಯ ಚಿಂತನೆ ಅತಿ ಮುಖ್ಯ ಎಂದು ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗ ಹಾಗೂ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಸಹಯೋಗದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಅಖಿಲ ಭಾರತ ಅಂತರ ವಿ.ವಿ. ಪುರುಷರ ಕಬಡ್ಡಿ ಪಂದ್ಯಾಟವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾ ಕ್ಷೇತ್ರ ಸರಕಾರ, ವಿಶ್ವವಿದ್ಯಾನಿಲಯ, ಸಂಘಸಂಸ್ಥೆಗಳ ಮೂಲಕ ಮತ್ತಷ್ಟು ಬೆಳೆಯಬೇಕು, ಜನರನ್ನು ಒಗ್ಗೂಡಿಸಬೇಕು ಈ ನಿಟ್ಟಿನಲ್ಲಿ ಸೂಕ್ತ ಸೂಕ್ಷ್ಮ ಚಿಂತನೆ ನಡೆಯಬೇಕು ಎಂದರು.
ಪ್ರತಿಯೊಬ್ಬರೂ ಉತ್ತಮ ಮನಃಸ್ಥಿತಿ ಹೊಂದಬೇಕಿದ್ದರೆ ದೇಹಾರೋಗ್ಯಕ್ಕೆ ಪೂರಕವಾದ ದೈಹಿಕ ವ್ಯಾಯಾಮ, ಕ್ರೀಡೆಯಲ್ಲಿ ನಿತ್ಯ ತೊಡಗಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ| ಕಿಶೋರ್ ಕುಮಾರ್ ಸಿ.ಕೆ., ಪೂರ್ಣಪ್ರಜ್ಞ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್, ಡಾ| ಜೆರಾಲ್ಡ್ ಸಂತೋಷ್ ಡಿ'ಸೋಜಾ, ವೀಕ್ಷಕ ಡಾ| ಸುನಿಲ್ ಕುಮಾರ್, ತಾಂತ್ರಿಕ ವೀಕ್ಷಕ ಡಾ| ದೇವೇಂದ್ರ ದುಲ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪಿಪಿಸಿ ಆಡಳಿತಾಕಾರಿ ಡಾ| ಎ. ಪಿ. ಭಟ್ ಇದ್ದರು.
ಶ್ರೀರಕ್ಷಾ ಹೆಗ್ಡೆ ಪ್ರಾರ್ಥಿಸಿದರು. ಪೂರ್ಣಪ್ರಜ್ಞ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಜಿ. ಎಸ್. ಚಂದ್ರಶೇಖರ್ ಸ್ವಾಗತಿಸಿದರು. ಸಂದೀಪ್ ಶೆಟ್ಟಿ ನಿರೂಪಿಸಿದರು. ಪ್ರಾಂಶುಪಾಲ ಡಾ| ರಾಮು ಎಲ್. ವಂದಿಸಿದರು.
ಅತಿಥಿಗಳಿಗೆ ಚೆಂಡೆ ನಾದದ ಸ್ವಾಗತ ನೀಡಲಾಯಿತು.
ಅದಕ್ಕೂ ಮುನ್ನ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಕಬಡ್ಡಿ ಕ್ರೀಡಾಂಗಣದ ಭೂಮಿಪೂಜೆ ನಡೆಸಿದರು.