
Nejar Case: ನೇಜಾರು ಪ್ರಕರಣದ ತನಿಖೆ ಭಾಗಶಃ ಪೂರ್ಣ
Thursday, November 23, 2023
ಉಡುಪಿ, ನ.23 (ಲೋಕಬಂಧು ವಾರ್ತೆ): ನೇಜಾರು ತೃಪ್ತಿ ಲೇಔಟ್ ನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 4ರ ವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ತನಿಖೆ ಬಗ್ಗೆ ಮಾಹಿತಿ ನೀಡಿ, ಕೊಲೆಯಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ನ ಗಗನಸಖಿ ಅಯ್ನಾಝ್ ಮತ್ತು ಆರೋಪಿ ಪ್ರವೀಣ್ ಅರುಣ್ ಚೌಗಲೆ ಕಳೆದ ಸುಮಾರು 8 ತಿಂಗಳಿಂದ ಪರಸ್ಪರ ಸ್ನೇಹಿತರಾಗಿದ್ದರು. ಚೌಗಲೆ ಅಲ್ಲೇ ಕ್ಯಾಬಿನ್ ಕ್ರ್ಯೂ ಆಗಿದ್ದ. ಅಯ್ನಾಝ್ ಗೆ ಸಹಾಯ ಮಾಡುತ್ತಿದ್ದ. ಆಕೆ ಮಂಗಳೂರಿನಲ್ಲಿ ಫ್ಲ್ಯಾಟ್ ವೊಂದರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಆರೋಪಿ ತನ್ನ ಸ್ಕೂಟರ್ ನ್ನು ಅಯ್ನಾಝ್ ಬಳಕೆಗೆ ನೀಡಿದ್ದ. ಸ್ನೇಹಿತೆ ಎಂಬ ಕಾರಣಕ್ಕಾಗಿ ಆ ರೀತಿ ಸಣ್ಣ ಪುಟ್ಟ ಸಹಾಯ ಮಾಡುತ್ತಿದ್ದ ಎಂದು ಎಸ್ಪಿ ತಿಳಿಸಿದರು.
ಅವರಿಬ್ಬರ ನಡುವಿನ ಸುಮಾರು ಎಂಟು ತಿಂಗಳ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಸುಮಾರು ಒಂದು ತಿಂಗಳಿಂದ ಅಯ್ನಾಝ್, ಚೌಗಲೆಯಿಂದ ಅಂತರ ಕಾಯ್ದುಕೊಳ್ಳಲು ಬಯಸಿ, ಆತನನ್ನು ದೂರ ಮಾಡುತ್ತಾಳೆ. ಅದೇ ದ್ವೇಷದಿಂದ ಆಕೆಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿ, ಆ್ಯಪ್ ವೊಂದರ ಮೂಲಕ ಲೊಕೇಶನ್ ಕಂಡುಹಿಡಿದು ಆಯ್ನಾಝ್ ಮನೆ ಪ್ರವೇಶಿಸಿದ್ದಾನೆ. ಕೃತ್ಯಕ್ಕೂ ಮುನ್ನ ಆತ ಅಯ್ನಾಝ್ ಮನೆಗೆ ಬಂದಿರಲಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು.
ನೇರವಾಗಿ ಮನೆಗೆ ಬಂದ ಆತ ಅಯ್ನಾಝ್ ಳನ್ನು ಇರಿದು ಕೊಲೆ ಮಾಡಿದ್ದು, ಅಡ್ಡ ಬಂದ ತಾಯಿ ಹಸೀನಾ ಮತ್ತು ಆಕೆಯ ಮಕ್ಕಳಾದ ಅಫ್ನಾನ್ ಮತ್ತು ಆಸಿಮ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ಕೃತ್ಯದ ಬಳಿಕ ಬೇರೆ ಬೇರೆ ವಾಹನಗಳಲ್ಲಿ ದ.ಕ ಜಿಲ್ಲೆಗೆ ಪರಾರಿಯಾಗಿದ್ದಾನೆ.
ಕೃತ್ಯದ ಸಂದರ್ಭ ಆಗಿರುವ ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕುವನ್ನು ಮನೆಯಲ್ಲೇ ಇಟ್ಟು ಹೆಂಡತಿಯ ತವರು ಮನೆಗೆ ಹೋಗಿದ್ದ ಎಂದರು.
ಎಲ್ಲಾ ಆಯಾಮದಲ್ಲಿ ಆತನ ತನಿಖೆ ನಡೆಸಿದ್ದು, ಪ್ರವೀಣ್ ಚೌಗಲೆಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ.
2007ರಲ್ಲಿ ಪೂನಾದಲ್ಲಿ ಪೊಲೀಸ್ ಆಗಿದ್ದ ಆತ, ಉತ್ತಮ ಸಂಬಳಕ್ಕಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸೇರಿದ್ದ.
ಕೊಲೆ ಸಂದರ್ಭ ಅಮಲು ಪದಾರ್ಥ ಸೇವನೆ ಬಗ್ಗೆ ಇನ್ನಷ್ಟೇ ವೈದ್ಯಕೀಯ ವರದಿ ಬರಬೇಕಿದೆ ಎಂದು ಎಸ್ ಪಿ ಅರುಣ್ ತಿಳಿಸಿದರು.
ಕುಡಚಿಯಲ್ಲಿ ಆರೋಪಿಗೆ ಆಶ್ರಯ ನೀಡಿದ ವ್ಯಕ್ತಿಯ ವಿಚಾರಣೆಯನ್ನೂ ನಡೆಸಲಾಗಿದೆ. ಹೆಚ್ಚುವರಿ ಮಾಹಿತಿ ಬೇಕಾಗಿದ್ದಲ್ಲಿ ಅವರಿಂದ ಮಾಹಿತಿ ಪಡೆಯಲಾಗುತ್ತದೆ.
ಹಿರಿಯಡ್ಕ ಕಾರಾಗೃಹದಲ್ಲಿ ಆರೋಪಿ ಚೌಗಲೆಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದ್ದು, ಇಬ್ಬರು ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
ಮೃತ ಅಯ್ನಾಝ್ ಕುಟುಂಬ ತನಿಖೆಗೆ ಸಹಕಾರ ನೀಡಿದೆ. ನೂರ್ ಮೊಹಮ್ಮದ್ ಕುಟುಂಬ ಬಹಳ ನೋವಿನಲ್ಲಿದ್ದಾರೆ. ವಿಶೇಷ ಪಿ.ಪಿ ನೇಮಕಕ್ಕೆ ಸಹಕಾರ ನೀಡಲಾಗುವುದು. ಕ್ಷಿಪ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ನೂರ್ ಮೊಹಮ್ಮದ್ ಕುಟುಂಬ ಮನವಿ ಮಾಡಿದೆ ಎಂದರು.
ತನಿಖೆಗೆ ಒಟ್ಟು 11 ತಂಡ ರಚನೆ ಮಾಡಿದ್ದು, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಎಲ್ಲಾ ಕಡೆಯಿಂದ ಮಾಹಿತಿ ಬಂದ ಕಾರಣ ಎಲ್ಲವನ್ನೂ ತನಿಖೆ ಮಾಡಲಾಗಿದೆ.
ನಾಲ್ವರ ಕೊಲೆ ಪ್ರಕರಣ ದೊಡ್ಡ ಸವಾಲಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾದ ಪ್ರಕರಣ ಇದಾಗಿತ್ತು. ತಂಡವಾಗಿ ಕೆಲಸ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.
ಚಾರ್ಜ್ ಶೀಟ್ ಸಲ್ಲಿಕೆಗೆ ಇನ್ನೂ 70- 80 ದಿನ ಇದೆ. ಎಲ್ಲಾ ಸಾಕ್ಷಿಗಳ ಸಂಗ್ರಹ ಮಾಡಲಾಗುತ್ತಿದೆ. ಸುಮಾರು 50 ಮಂದಿ ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ.
ಆರೋಪಿ ಪತ್ತೆ ಮಾಡಿದ ಪೊಲೀಸರಿಗೆ ಸೂಕ್ತ ಬಹುಮಾನ ನೀಡುವ ಬಗ್ಗೆ ಶಿಫಾರಸು ಮಾಡಿರುವುದಾಗಿ ಎಸ್ ಪಿ ಡಾ. ಕೆ. ಅರುಣ್ ಹೇಳಿದರು.