
U.T. Khader: ನಾನು ಎಲ್ಲರ ಸ್ಪೀಕರ್: ಜಮೀರ್ ಗೆ ಖಾದರ್ ತಿರುಗೇಟು
Saturday, November 18, 2023
ಬೆಂಗಳೂರು, ನ.18 (ಲೋಕಬಂಧು ವಾರ್ತೆ): ನಾನು ಎಲ್ಲರ ಸ್ಪೀಕರ್. ಸ್ಪೀಕರ್ ಸ್ಥಾನವನ್ನು ರಾಜಕೀಯ, ಜಾತಿ ಧರ್ಮದಿಂದ ನೋಡುವಂತಿಲ್ಲ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳುವ ಮೂಲಕ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಸ್ಪೀಕರ್ ಸ್ಥಾನದ ಬಗ್ಗೆ ಜಮೀರ್ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನೂ ಮೆಟ್ಟಿ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ ಇದಾಗಿದೆ. ನನಗೆ ಗೌರವ ಕೊಡುವುದು ಯು.ಟಿ ಖಾದರ್ ಗೆ ಗೌರವ ಕೊಡುವುದು ಅಲ್ಲ. ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ. ಅಲ್ಲಿ ಕೂರುವ ನಾವು ಗೌರವ ಉಳಿಸುವ ಕೆಲಸ ಮಾಡಬೇಕು ಎಂದರು.
ನಾನು ಯಾರ ಹೇಳಿಕೆಗೂ ಕಮೆಂಟ್ ಮಾಡುವುದಿಲ್ಲ. ನನ್ನನ್ನು ಜಾತಿ, ಧರ್ಮದ ಆಧಾರದಲ್ಲಿ ಯಾರೂ ಆ ಪೀಠದಲ್ಲಿ ಕೂರಿಸಿಲ್ಲ. ಅರ್ಹತೆಗೆ ಅನುಗುಣವಾಗಿ ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸುವ ವಿಶ್ವಾಸದಿಂದ ಕೂರಿಸಿದ್ದಾರೆ.
ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ನಾನು ಎಲ್ಲರಿಗೂ ಗೌರವ ಕೊಟ್ಟು ಗೌರವ ಪಡೆಯುತ್ತೇನೆ. ಎಲ್ಲರ ಸ್ಪೀಕರ್ ಆಗಿ ಕೆಲಸ ನಿರ್ವಹಿಸುತ್ತೇನೆ.
ಸ್ಪೀಕರ್ ಸ್ಥಾನವನ್ನು ಜಾತಿ ಧರ್ಮ ಬಿಟ್ಟು ನೋಡಬೇಕು ಎಂದರು
ತೆಲಂಗಾಣ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಮುಸ್ಲಿಂ ಸ್ಪೀಕರ್ ಮುಂದೆ ಬಿಜೆಪಿಯವರು ನಮಸ್ಕಾರ ಸಾಬ್ ಎಂದು ಕೈ ಮುಗಿಯುತ್ತಾರೆ ಎಂದು ಜಮೀರ್ ಅಹಮದ್ ಹೇಳಿದ್ದರು.