
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಸದಾನಂದ ಸುವರ್ಣ ವಿಧಿವಶ
Tuesday, July 16, 2024
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಸದಾನಂದ ಸುವರ್ಣ ವಿಧಿವಶ
ಲೋಕಬಂಧುನ್ಯೂಸ್ ಡೆಸ್ಕ್, ಮಂಗಳೂರು
ಚಿತ್ರ ನಿರ್ಮಾಪಕ, ಲೇಖಕ, ಹಿರಿಯ ರಂಗಕರ್ಮಿ, ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತ ಸದಾನಂದ ಸುವರ್ಣ (92 ವರ್ಷ) ವಯೋಸಹಜ ಅಸೌಖ್ಯದಿಂದ ಮಂಗಳವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಮೂಲ್ಕಿಯವರಾದ ಸುವರ್ಣ ಹಲವು ವರ್ಷ ಕಾಲ ಮುಂಬಯಿನಲ್ಲಿ ವಾಸವಾಗಿದ್ದು ಕನ್ನಡ ರಂಗಭೂಮಿಯಲ್ಲಿ ಅನೇಕ ವರ್ಷ ತೊಡಗಿಕೊಂಡಿದ್ದರು. ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್ ಮಾರ್ಷಲ್, ಉರುಳು ಮತ್ತಿತರ ಜನಪ್ರಿಯ ನಾಟಕ ರಚಿಸಿದ ಹೆಗ್ಗಳಿಕೆ ಅವರದ್ದು.
ಅವರ ನಿರ್ದೇಶನದ `ಗುಡ್ಡೆದ ಭೂತ; ಧಾರಾವಾಹಿ ದೂರದರ್ಶನದಲ್ಲಿ ಬಹಳ ಜನಮೆಚ್ಚುಗೆ ಗಳಿಸಿತ್ತು. ಘಟಶ್ರಾದ್ಧ ಸಿನಿಮಾಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಲಭಿಸಿತ್ತು.
ಮಂಗಳೂರಿನ ಹವ್ಯಾಸಿ ರಂಗಭೂಮಿಗೆ ಹೊಸ ಸ್ಪರ್ಷ ನೀಡಿದ್ದ ಸುರ್ಣ, ಇತರ ಭಾಷೆಯ ನಾಟಕಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದು ಕುರುಡು ಕಾಂಚಾಣ, ಗುಡ್ಡೆದ ಭೂತ ಮತ್ತು ಗೋಂದೋಳು ಅವರ ಸ್ವರಚಿತ ನಾಟಕಗಳು.
ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್ ಮಾರ್ಷಲ್ ಮತ್ತು ಉರುಳು ಅವರ ಅತ್ಯಂತ ಜನಪ್ರಿಯ ನಾಟಕಗಳು. ಹುಚ್ಚು ಮನಸ್ಸಿನ ಹತ್ತು ಮುಖಗಳು ಸಾಕ್ಷ್ಯಚಿತ್ರ ವ್ಯಾಪಕ ಮೆಚ್ಚುಗೆ ಗಳಿಸಿತ್ತು.
ಮಹಾರಾಷ್ಟ್ರ ನಾಟಕ ಅಕಾಡೆಮಿಯಿಂದ ನಟನಾ ಡಿಪ್ಲೊಮಾ ಮತ್ತು ಛಾಯಾಗ್ರಹಣದಲ್ಲಿ ಪದವಿ ಪಡೆದಿದ್ದರು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2023- 24ನೇ ಸಾಲಿನ ಬಿ.ವಿ. ಕಾರಂತ ಪ್ರಶಸ್ತಿ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ ನ ವಾರ್ಷಿಕ ಆತ್ಮಶಕ್ತಿ ಪ್ರಶಸ್ತಿ, 1977ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ಸುವರ್ಣ ಅವರ ಘಟಶ್ರಾದ್ಧಕ್ಕೆ ಪ್ರತಿಷ್ಠಿತ ಸ್ವರ್ಣ ಕಮಲ ಪ್ರಶಸ್ತಿ, ಸುವರ್ಣ ಅವರ `ಕುಬಿ ಮತ್ತು ಇಯಾಲ' ಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.
ಮುಂಬಯಿಯಲ್ಲಿ ಸುವರ್ಣ ಅವರ ಅಭಿಮಾನಿಗಳು ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ಆ ಮೂಲಕ ವಾರ್ಷಿಕವಾಗಿ ದಿವಂಗತ ಡಾ| ಶಿವರಾಮ ಕಾರಂತ ಸ್ಮರಣೆಯಲ್ಲಿ ಕನ್ನಡಿಗರ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸುತ್ತಿದ್ದಾರೆ.
ಮೃತರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಬುಧವಾರ ನಡೆಯಲಿದೆ