ಕರಾವಳಿಗೆ ಪ್ರತ್ಯೇಕ ರೈಲ್ವೇ ವಿಭಾಗ: ಶಾಸಕ ಭಂಡಾರಿ ಮನವಿ
Thursday, July 18, 2024
ಕರಾವಳಿಗೆ ಪ್ರತ್ಯೇಕ ರೈಲ್ವೇ ವಿಭಾಗ: ಶಾಸಕ ಭಂಡಾರಿ ಮನವಿ
ಲೋಕಬಂಧುನ್ಯೂಸ್ ಡೆಸ್ಕ್, ಮಂಗಳೂರು
ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ರೈಲ್ವೇ ವಿಭಾಗ ತೆರೆಯುವಂತೆ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.
ಬುಧವಾರ ಮಂಗಳೂರಿಗೆ ಆಗಮಿಸಿದ್ದ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಿದ ಶಾಸಕ ಡಾ.ಭಂಡಾರಿ, ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗ ತೋಕೂರು ವರೆಗೆ, ನೈಋತ್ಯ ರೈಲ್ವೇಯ ಮೈಸೂರು ವಿಭಾಗ ಮೈಸೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರು ಜಂಕ್ಷನ್ ವರೆಗೆ ಹಾಗೂ ರೋಹಾದಿಂದ ತೋಕೂರು ವರೆಗೆ ಕೊಂಕಣ ರೈಲ್ವೆ ನಿಗಮಕ್ಕೆ ಸಂಬಂಧಪಟ್ಟಿದೆ.
ಪಾಲ್ಘಾಟ್, ಮೈಸೂರು ಮತ್ತು ಕೊಂಕಣ ರೈಲ್ವೆಗೆ ಮಂಗಳೂರು ಸಂಪರ್ಕ ಕೊಂಡಿಯಾಗಿದೆ.
ಕೊಂಕಣ ರೈಲ್ವೇ ನಿಗಮವನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನ ಮಾಡಿ ಕರ್ನಾಟಕ ಕರಾವಳಿ ಭಾಗದ ರೈಲ್ವೇ ಪ್ರದೇಶಕ್ಕೆ ಪ್ರತ್ಯೇಕ ಮಂಗಳೂರು ವಿಭಾಗ ಸೃಜಿಸಬೇಕು ಎಂದು ಆಗ್ರಹಿಸಿದರು.
ಕೊಂಕಣ ರೈಲ್ವೇ ನಿಗಮ 5 ಸಾವಿರ ಕೋಟಿ ರೂ. ನಷ್ಟದಲ್ಲಿದೆ. ಜೋಡಿ ಹಳಿ ನಿರ್ಮಾಣಕ್ಕೆ ನಿಗಮದ ಬಳಿ ಹಣವಿಲ್ಲ.
ಹೆಚ್ಚುವರಿ ಬೋಗಿ ಹಾಗೂ ಹೊಸ ಜರ್ಮನ್ ತಂತ್ರಜ್ಞಾನದ ಎಲ್.ಎಚ್.ಬಿ ರೈಲು ಬೋಗಿಗಳ ಖರೀದಿಗೂ ನಿಗಮದ ಬಳಿ ಹಣವಿಲ್ಲ.
ಕೊಂಕಣ ರೈಲ್ವೇ ನಿಗಮ ವ್ಯಾಪ್ತಿಯಲ್ಲಿ ರೈಲು ಟಿಟೆಟ್ ದರ ಉಳಿದ ಕಡೆಗಳಿಗಿಂತ 140ರಷ್ಟು ಜಾಸ್ತಿಯಿದೆ.
ಕೊಂಕಣ ರೈಲ್ವೇ ನಿಗಮದ ತೋಕೂರಿನಿಂದ ರೋಹಾ ವರೆಗೆ ಹಾಗೂ ನೈಋತ್ಯ ರೈಲ್ವೇಯ ಮೈಸೂರು ವಿಭಾಗದ ಮೈಸೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರು ಜಂಕ್ಷನ್ ವರೆಗೆ ಏಕ ಮಾರ್ಗವಾಗಿದ್ದು, ಇದು ದ್ವಿಪಥ ಹಾಗೂ ವಿದ್ಯುದೀಕರಣವಾಗಬೇಕು.
ರೈಲ್ವೇ ನಿಲ್ದಾಣಗಳ ಆಧುನೀಕರಣ ಹಾಗೂ ಎಲಿವೇಟರ್ಗಳ ವ್ಯವಸ್ಥೆ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.