
ನ.6ರಿಂದ ಮಲ್ಪೆ- ಆದಿವುಡುಪಿ ಹೆದ್ದಾರಿ ಕಾಮಗಾರಿ ಆರಂಭ: ಶಾಸಕ ಯಶಪಾಲ್ ಸೂಚನೆ
Monday, November 4, 2024
ಲೋಕಬಂಧು ನ್ಯೂಸ್, ಉಡುಪಿ
ರಾಷ್ಟ್ರೀಯ ಹೆದ್ದಾರಿ 169ಎ ಮಲ್ಪೆ- ಅದಿವುಡುಪಿ ಸಹಿತ ಹಿರಿಯಡ್ಕ, ಪರ್ಕಳ ಹಾಗೂ ಪೆರ್ಡೂರು ಭಾಗದ ರಾಷ್ಟೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಹಾಗೂ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅಧಿಕಾರಿಗಳೊಂದಿಗೆ ನ.4ರಂದು ಸಭೆ ನಡೆಸಿದರು.
ಮಲ್ಪೆ-ಆದಿವುಡುಪಿ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದ ಕುಂಠಿತವಾಗಿದ್ದು, ಈಗಾಗಲೇ ಭೂ ಮಾಲೀಕರಿಗೆ ಪರಿಹಾರ ಪಾವತಿಯ ಮೊತ್ತದ ಬಗ್ಗೆ ನೋಟಿಸ್ ನೀಡಲಾಗಿದೆ.
ಭೂ ಸ್ವಾಧೀನ ಪ್ರಕ್ರಿಯೆಯ 214 ಕಡತಗಳ ಪೈಕಿ 19 ಸರ್ಕಾರಿ ಜಮೀನು ಹೊರತುಪಡಿಸಿ 195 ಖಾಸಗಿ ಜಮೀನು ಮಾಲಿಕರ ಪೈಕಿ 51 ಮಂದಿ ನೋಟೀಸ್ ಸ್ವೀಕರಿಸಿದ್ದು, 48 ಮಂದಿ ಪರಿಹಾರ ಮೊತ್ತ ಪಡೆಯಲು ತಮ್ಮ ದಾಖಲಾತಿ ಒದಗಿಸಿದ್ದಾರೆ. ಬಾಕಿ ಇರುವ 144 ಮಂದಿ ಜಮೀನು ಮಾಲಕರನ್ನು ಸಂಪರ್ಕಿಸಿ ನೋಟೀಸ್ ನೀಡುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ನ.6 ಬುಧವಾರದಿಂದಲೇ ಮಲ್ಪೆ- ಆದಿವುಡುಪಿ ರಸ್ತೆ ಕಾಮಗಾರಿ ಮರು ಆರಂಭ ಮಾಡುವಂತೆ ಶಾಸಕ ಯಶಪಾಲ್ ಸುವರ್ಣ ಸೂಚನೆ ನೀಡಿದರು.
ಪರ್ಕಳ ಹೆದ್ದಾರಿ ಕಾಮಗಾರಿ ನ್ಯಾಯಾಲಯ ತಡೆಯಾಜ್ಞೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಸರ್ಕಾರದ ಪರವಾಗಿ ಬಂದಿದ್ದು, ಭೂ ಮಾಲೀಕರಿಗೆ ಕೂಡಲೇ ಪರಿಹಾರದ ಹಣ ನೀಡಬೇಕು ಮತ್ತು ಕಾಮಗಾರಿ ಪ್ರಾರಂಭಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಪೆರ್ಡೂರು ದೇವಸ್ಥಾನ ಸಮೀಪದ 600 ಮೀ. ವ್ಯಾಪ್ತಿಯಲ್ಲಿ ಕಾಮಗಾರಿ ಸಂಬಂಧ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅದನ್ನು ಬಿಟ್ಟು ಉಳಿದ ಕಡೆ ಕಾಮಗಾರಿ ಕೈಗೊಳ್ಳಬೇಕು. ದೇವಸ್ಥಾನ, ಕಲ್ಯಾಣಿಯ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದೆಂಬುದು ಭಕ್ತರ ಬೇಡಿಕೆ. ಅದನ್ನು ಮನಗಂಡು ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಮುಂದಾಗಬೇಕು ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದರು.
ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ, ರಾಷ್ಟೀಯ ಹೆದ್ದಾರಿ 169ಎ ಅಧಿಕಾರಿಗಳಾದ ಮಂಜುನಾಥ ಗೌಡ, ನವೀನ್ ರಾಜ್ ಮತ್ತು ಮಂಜುನಾಥ ನಾಯಕ್, ನಗರಸಭಾ ಸದಸ್ಯ ಸುಂದರ ಕಲ್ಮಾಡಿ, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.