ಆದಿಯೋಗಿ ರಥಯಾತ್ರೆಗೆ ಚಾಲನೆ

ಲೋಕಬಂಧು ನ್ಯೂಸ್, ಉಡುಪಿ
ಕೊಯಮತ್ತೂರಿನ ಈಶ ಯೋಗ ಮಹಾಶಿವರಾತ್ರಿ ಶಿವಾಂಗ ಸಾಧನದ ಭಾಗವಾಗಿ 70 ದಿನಗಳ ಕಾಲ ಸಂಚರಿಸುವ ಆದಿಯೋಗಿ ರಥಯಾತ್ರೆ ಡಿ.7 ಭಾನುವಾರ ಆರಂಭಗೊಂಡಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ಕಿ.ಮೀ. ಕ್ರಮಿಸುವ ರಥಯಾತ್ರೆಗೆ ಕೃಷ್ಣಮಠದ ಮುಂಭಾಗ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಚಾಲನೆ ನೀಡಿದರು.ಫೆಬ್ರವರಿ 13ರಂದು ಮಹಾಶಿವರಾತ್ರಿ ಸಂದರ್ಭದಲ್ಲಿ ಕೊಯಮತ್ತೂರಿನ ಈಶ ಯೋಗ ಕೇಂದ್ರದ ಬಳಿಯ ಭವ್ಯ ಆದಿಯೋಗಿ ಸನ್ನಿಧಿಯಲ್ಲಿ ರಥಯಾತ್ರೆ ಸಂಪನ್ನಗೊಳ್ಳಲಿದೆ.ಈಶ ಫೌಂಡೇಶನ್‌ನ ಸದ್ಗುರು ವಿನ್ಯಾಸಗೊಳಿಸಿರುವ ಶಕ್ತಿಯುತ ಆಧ್ಯಾತ್ಮಿಕ ಸಾಧನ ಶಿವಾಂಗ ಸಾಧನ, ಆಂತರ್ಯದಲ್ಲಿರುವ ಭಕ್ತಿಯನ್ನು ವ್ಯಕ್ತಪಡಿಸಲು ಮತ್ತು ಆದಿಯೋಗಿ ಶಿವನತ್ತ ಗ್ರಹಣಶೀಲತೆ ಹೆಚ್ಚಿಸಲು ಸಹಕಾರಿಯಾಗುತ್ತದೆ.ಈ ರಥಯಾತ್ರೆ ಡಿ.12ರಂದು ಮಂಗಳೂರು ತಲುಪಲಿದ್ದು ಅಲ್ಲಿಂದ ಪುತ್ತೂರು, ಸುಳ್ಯ, ಮಡಿಕೇರಿ, ಬೆಟ್ಟದಪುರ, ಕೆ.ಆರ್. ನಗರ, ಮೈಸೂರು, ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿ, ಹೊಸಕೋಟೆ, ಮಾಲೂರು, ರಾಯಕೋಟೆ, ಅವಿನಾಶಿ ಸೇರಿದಂತೆ ಪ್ರಮುಖ ಪಟ್ಟಣಗಳ ಮೂಲಕ ಸಾಗಿ ವೆಳ್ಳಿಯಂಗಿರಿ ಪರ್ವತದ ತಪ್ಪಲಿನ‌ ಈಶ ಯೋಗ ಕೇಂದ್ರ ತಲುಪಲಿದೆ.ಶಿವನ ಬಗೆಗಿನ ಭಕ್ತಿಯ ಅಭಿವ್ಯಕ್ತಿಯಾಗಿ ರೂಪಿಸಲಾಗಿರುವ ಈ ಯಾತ್ರೆ ಎಲ್ಲರನ್ನು ಶಿವರಾತ್ರಿ ಮಹೋತ್ಸವಕ್ಕೆ ಸ್ವಾಗತಿಸುವುದರೊಂದಿಗೆ ಕರ್ನಾಟಕದಾದ್ಯಂತ ಸಾವಿರಾರು ಜನರಿಗೆ ಈ ಪಯಣದಲ್ಲಿ ಭಾಗಿಯಾಗಲು, ಸ್ವಯಂಸೇವೆ ಮಾಡಲು ಮತ್ತು ತನ್ಮಯರಾಗಲು ಅವಕಾಶ ಕಲ್ಪಿಸುತ್ತದೆ.


ಅರ್ಪಣೆಯ ಮನೋಭಾವಕ್ಕೆ ಅನುಗುಣವಾಗಿ ಆದಿಯೋಗಿ ರಥವನ್ನು ಶಿವಾಂಗ ಸಾಧಕರು ಮತ್ತು ಭಕ್ತರು ತಾವಾಗಿಯೇ ಎಳೆಯುತ್ತಾರೆ. ಇಡೀ ಪ್ರಯಾಣವನ್ನು ಶಿಸ್ತುಬದ್ಧ, ಭಕ್ತಿಪೂರ್ವಕ ಭಾಗವಹಿಸುವಿಕೆಯ ಕ್ರಿಯೆಯಾಗಿಸಲಾಗುತ್ತಿದ್ದು ಆದಿಯೋಗಿಯ  ಸಾನ್ನಿಧ್ಯ (ಮೂರ್ತಿ) ಹೊತ್ತ ರಥ ಪ್ರತೀ ಕಡೆಗಳಲ್ಲಿ ಮೆರವಣಿಗೆ, ಅರ್ಪಣೆ, ಸ್ತೋತ್ರಪಠನ ಮತ್ತು ಸಮುದಾಯ ಸಭೆಗಳಿಗೆ ಕೇಂದ್ರಬಿಂದುವಾಗಿರಲಿದೆ. ಸ್ಥಳೀಯ ನಿವಾಸಿಗಳು ಮತ್ತು ಭಕ್ತರು ಯಾತ್ರೆಯ ಭಾಗವಾಗಿ ಸರಳ ಯೋಗ ಅಭ್ಯಾಸ ಅಥವಾ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪೂರಕವಾಗಿದೆ.


ಯಾತ್ರೆಯಲ್ಲಿ ಎಲ್ಲರಿಗೂ ಮುಕ್ತವಾಗಿದ್ದು, ಭಾಗವಹಿಸಲು ಇಚ್ಚಿಸುವವರು ಒಂದು ದಿನ, ಹಲವು ದಿನಗಳು ಅಥವಾ ಸಂಪೂರ್ಣ ಅವಧಿಗೆ ಸೇರಬಹುದು. ಯಾವುದೇ ಹಂತದಲ್ಲಿ ಯಾತ್ರೆಯಲ್ಲಿ ಭಾಗವಹಿಸಕು ಆಸಕ್ತಿ ಹೊಂದಿರುವವರು ಅಥವಾ ಸ್ವಯಂಸೇವೆಯ ಮೂಲಕ ಮತ್ತು ಸ್ಥಳೀಯ ಸೌಲಭ್ಯ ಒದಗಿಸುವ ಮೂಲಕ ಯಾತ್ರೆಗೆ ನೆರವಾಗಲು ಇಚ್ಚಿಸುವವರು ಶಿವ ಯಾತ್ರೆ ತಂಡ 98456 67758 ಅಥವಾ 95385 29407ನ್ನು ಸಂಪರ್ಕಿಸಬಹುದು.