ಮೇ10: ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವ
Saturday, March 22, 2025
ಲೋಕಬಂಧು ನ್ಯೂಸ್
ಕಾರ್ಕಳ: ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವ ಮೇ 10ರಂದು ಮಂಗಳೂರು ನೆಹರು ಮೈದಾನದಲ್ಲಿ ನಡೆಯಲಿದೆ ಎಂದು ಹಿರಿಯ ಸಹಕಾರಿ ಧುರೀಣ, ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದರು.ಇಲ್ಲಿನ ದಾನಶಾಲೆ ಬಾಹುಬಲಿ ಪ್ರವಚನ ಮಂದಿರದಲ್ಲಿ ಶನಿವಾರ ನಡೆದ ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದರು.ಕಾರ್ಕಳದಲ್ಲೇ ಪ್ರಾರಂಭಗೊಂಡ ಸ್ವಸಹಾಯ ಸಂಘ, ದೇಶಕ್ಕೇ ಮಾದರಿ ಸಂಘವಾಗಿ ಗುರುತಿಸಲ್ಪಟ್ಟಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು, ಮಹಿಳೆ ಸಮಾಜದ ಕುಟಂಬ ಮಾತ್ರವಲ್ಲ ಸಮಾಜದ ಶಕ್ತಿಯಾಗಬೇಕು. ಆಕೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ಸಮಾಜ ಅಭಿವೃದ್ದಿಯಾಗುತ್ತದೆ ಎಂಬ ಆಶಯದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದರು.
ನವೋದಯ ಕುಟುಂಬಕ್ಕೆ ಸೇರಿದ ನಂತರ ಸದಸ್ಯರಿಗೆ ಸುಮಾರು 5 ಲಕ್ಷ ಸಮವಸ್ತ್ರ ವಿತರಣೆಗೆ ಮಾರ್ಚ್ 25ರಂದು ಚಾಲನೆ ನೀಡಲಿದ್ದು ಜಾತಿ, ಧರ್ಮ, ಬಡತನ , ಸಿರಿತನ ಎನ್ನುವ ಭೇದ ನಿವಾರಿಸಿ ಎಲ್ಲರೂ ಸಮಾನರು ಎನ್ನುವ ದೃಷ್ಟಿಯಿಂದ ಸಮವಸ್ತ್ರ ನೀಡಲಾಗುತ್ತಿದೆ.
ಸ್ವಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡುವ ಮೈಕ್ರೋ ಫೈನಾನ್ಸ್ ಗಳಿಂದ ಯಾವುದೇ ತೊಂದರೆಯಾಗಿಲ್ಲ. ಬೇರೆ ಹಣಕಾಸು ಸಂಸ್ಥೆಗಳಿಂದ ರೈತರು, ಜನಸಾಮಾನ್ಯರಿಗೆ ತೊಂದರೆಗಳಾಗುತ್ತಿದೆ. ಈ ಬಗ್ಗೆ ಸರಕಾರ ಗಮನಿಸಬೇಕು ಎಂದ ಅವರು, ಸದಸ್ಯರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಅವರಿಗೆ ಹೆಚ್ಚಿನ ಶಿಕ್ಷಣ ನೀಡಬೇಕು ಪ್ರತಿಭಾವಂತ ಮಕ್ಕಳಿಗೆ ಸಹಾಯ ಮಾಡುವುದರ ಜೊತೆಗೆ ಮಾರ್ಚ್ ನಂತರ ನವೋದಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ನೌಕರರ ಸಂಬಳ ಹೆಚ್ಚಿಸಲಾಗುವುದು ಎಂದರು.
ನವೋದಯ ಸ್ವಸಹಾಯ ಸಂಘದಲ್ಲಿ ಸದಸ್ಯರ ಸಾಮರ್ಥ್ಯಕ್ಕೆ ತಕ್ಕಂತೆ ಕಡಿಮೆ ಬಡ್ಡಿ ದರದಲ್ಲಿ ಚಕ್ರ ಬಡ್ಡಿ ವಿಧಿಸದೆ, ಸಾಲ ನೀಡುವ ಸಂದರ್ಭದಲ್ಲಿ ಠೇವಣಿ ಕಳೆಯದೆ ಸದಸ್ಯರಿಗೆ ಸಾಲ ನೀಡಲಾಗುತ್ತಿದ್ದು ಲಾಭದ ದೃಷ್ಟಿಯಲ್ಲಿ ಜನರನ್ನು ತೊಂದರೆಗೊಡ್ಡದ ಕಾರಣ ಶೇ.99ಕ್ಕೂ ಅಧಿಕ ಪ್ರಮಾಣದಲ್ಲಿ ಸಾಲ ಮರು ಪಾವತಿಯಾಗಿದೆ.
ಸದಸ್ಯರ ಅಪಘಾತ, ಮರಣ ಸಂದರ್ಭದಲ್ಲಿ ಚೈತನ್ಯ ವಿಮಾ ಯೋಜನೆಯಡಿ 1 ಲಕ್ಷ ರೂ. ಅವರ ಕುಟುಂಬಗಳಿಗೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್'ನ ಟ್ರಸ್ಟಿ ಮೇಘರಾಜ್ ರಾಜೇಂದ್ರ ಕುಮಾರ್, ಸುನಿಲ್ ಬಜಗೋಳಿ ಉಪಸ್ಥಿತರಿದ್ದರು.
ಎಸ್.ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ, ಪ್ರಸ್ತಾವನೆಗೈದರು. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಪ್ರಧಾನ ವ್ಯವಸ್ಥಾಪಕಿ ಪೂರ್ಣಿಮಾ ವಂದಿಸಿದರು.