.jpg)
ಸೃಜನಶೀಲ ಚಟುವಟಿಕೆ ಮೂಲಕ ಜಾಗೃತಿ
Wednesday, April 16, 2025
ಲೋಕಬಂಧು ನ್ಯೂಸ್
ಉಡುಪಿ: ಸೃಜನಶೀಲ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು ಉಡುಪಿ ವಲಯದ ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಜನಾರ್ದನ ಕೊಡವೂರು ಹೇಳಿದರು.
ಮಣಿಪಾಲದ ತ್ರಿವರ್ಣ ಆರ್ಟ್ಸ್ ಕ್ಲಾಸಸ್ ಆ್ಯಂಡ್ ಗ್ಯಾಲರಿಯಲ್ಲಿ ಮಂಗಳವಾರ ನಡೆದ ವಿಶ್ವಕಲಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅಭ್ಯಾಗತರಾಗಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಭಾವನಾತ್ಮಕವಾಗಿ ಕಲೆಯಲ್ಲಿ ಸ್ಪಂದಿಸಿದಾಗ ಮಾತ್ರ ಇಂಥ ಕಲಾಚಟುವಟಿಕೆಗಳು ಮೂಡಿ ಬರಲು ಸಾಧ್ಯ ಎಂದರು.
ಕಲಾ ವಿದ್ಯಾರ್ಥಿನಿಯರಾದ ಅನೂಷ ಆಚಾರ್ಯ, ಉಜ್ವಲ್ ನಿಟ್ಟೆ, ಅಶ್ವಿನಿ ಶೆಟ್ಟಿ, ಮೀತಾ ಪೈ ಕೈಯಲ್ಲಿ ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಮೂಡಿ ಬಂದ 150 ಚದರ ಅಡಿ ವಿಸ್ತೀರ್ಣದ ಮೊನಾಲಿಸ ಕಲಾಕೃತಿ ಎಲ್ಲರನ್ನು ಆಕರ್ಷಿಸಿತು.
ಇತ್ತೀಚಿಗೆ ನಡೆದ ಮಣಿಪಾಲ ಮತ್ತು ಕುಂದಾಪುರ ತ್ರಿವರ್ಣ ಆರ್ಟ್ಸ್ ಕ್ಲಾಸಸ್ 19ರಿಂದ 75 ವಯೋಮಿತಿಯ 23 ವಿದ್ಯಾರ್ಥಿ ನಿಯರ 'ಪರಂಪರಾ' ಚಿತ್ರಕಲಾ ಪ್ರದರ್ಶನದ ಅಭಿನಂದನಾ ಪತ್ರ ಮತ್ತು ವಿವಿಧ ಪ್ರಶಸ್ತಿ ವಿತರಿಸಿದರು. 'ದಿ ಬೆಸ್ಟ್ ಆರ್ಟ್ ವರ್ಕ್' ಪ್ರಶಸ್ತಿಂನ್ನು ಶರಣ್ ಎಸ್. ಕುಮಾರ್, 'ದಿ ಬೆಸ್ಟ್ ಪಬ್ಲಿಕ್ ವೀವ್ಹ್ ಆರ್ಟ್' ಪ್ರಶಸ್ತಿಯನ್ನು ಉಜ್ವಲ್ ನಿಟ್ಟೆ, ಹಾಗೂ 'ಲಕ್ಕಿ ವಿನ್ನರ್' ಪ್ರಶಸ್ತಿಯನ್ನು ಲತಾ ಭಾಸ್ಕರ್, ರೇವತಿ ಡಿ., ಯಶಾ ಜಿ., ಸುಷ್ಮಾ ಪೂಜಾರಿ, ಸಂಜನಾ ಶ್ರೀನಿವಾಸ್ ಕಲಾ ಪ್ರಶಸ್ತಿಯೊಂದಿಗೆ ಒಟ್ಟು 18,500 ಸಾವಿರ ರೂ. ನಗದು ಮತ್ತು ಅಭಿನಂದನಾ ಪತ್ರ ನೀಡಲಾಯಿತು.
ಕಲಾ ಕೇಂದ್ರದ ಮಾಗದರ್ಶಕ ಕಲಾವಿದ ಹರೀಶ್ ಸಾಗಾ ಸ್ವಾಗತಿಸಿದರು. ಕಲಾ ವಿದ್ಯಾರ್ಥಿನಿಯರಾದ ವಿಧು ಶಂಕರ್ ಬಾಬು ಪ್ರಾರ್ಥಿಸಿ, ಅರುಣಾ ನಾಯರ್ ನಿರೂಪಿಸಿದರು. ಉಜ್ವಲ್ ನಿಟ್ಟೆ ವಂದಿಸಿದರು.