-->
Kundapura: ಕಲಾ ನಿರ್ದೇಶಕ ದಿನೇಶ್ ಮಂಗಳೂರು ನಿಧನ

Kundapura: ಕಲಾ ನಿರ್ದೇಶಕ ದಿನೇಶ್ ಮಂಗಳೂರು ನಿಧನ

ಲೋಕಬಂಧು ನ್ಯೂಸ್, ಕುಂದಾಪುರ
ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಹಾಗೂ ಕಲಾ ನಿರ್ದೇಶಕ ದಿನೇಶ್ ಮಂಗಳೂರು ನಿಧನರಾಗಿದ್ದಾರೆ.
ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಬ್ರೈನ್ ಹ್ಯುಮರೇಜ್ ಉಂಟಾದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದರು.


ಮಿಂಚಿದ ಕಲಾವಿದ
ದಿನೇಶ್ ಮಂಗಳೂರು ಪೋಷಕ ಪಾತ್ರಗಳ ಜೊತೆಗೆ ಖಡಕ್ ನೆಗೆಟಿವ್ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ‘ರಿಕ್ಕಿ’, ‘ಉಳಿದವರು ಕಂಡಂತೆ’, ‘ಕೆಜಿಎಫ್’, ‘ರಣ ವಿಕ್ರಮ’, ‘ಅಂಬಾರಿ’, ‘ಸವಾರಿ’, ‘ಇಂತಿ ನಿನ್ನ ಪ್ರೀತಿಯ’, ‘ಆ ದಿನಗಳು’, ‘ಸ್ಲಂ ಬಾಲ’, ‘ದುರ್ಗಿ’, ‘ಸ್ಟೈಲ್’, ‘ಅತಿಥಿ’, ‘ಪ್ರೇಮ’, ‘ನಾಗಮಂಡಲ’, ‘ಶುಭಂ’ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು.


ಅವರ ನೈಜ ಅಭಿನಯ ಶೈಲಿ ಮತ್ತು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರಲ್ಲಿ ಸದಾ ಸ್ಮರಣೀಯರಾಗಿದ್ದರು.


ಕಲಾ ನಿರ್ದೇಶಕನಾಗಿ
ನಟನಾಗುವ ಮುನ್ನ ದಿನೇಶ್ ಹಲವು ಚಿತ್ರಗಳಿಗೆ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ‘ಪ್ರಾರ್ಥನೆ’, ‘ತುಘ್ಲಕ್’, ‘ಬೆಟ್ಟದ ಜೀವ’, ‘ಸೂರ್ಯಕಾಂತಿ’, ‘ಜಸ್ಟ್ ಪಾಸ್ (35/100)’, ‘ನಾನು ನನ್ನ ಕನಸು’, ‘ಮೊದಲ ಸಲ’, ‘ವೀರ ಮದಕರಿ’, ‘ವಾಯುಪುತ್ರ’, ‘ರಾವಣ’, ‘ದರೋಡೆ’, ‘ಮಾಸ್ತಿ’, ‘ನಂ.73 ಶಾಂತಿ ನಿವಾಸ’, ‘ಗಂಡುಗಲಿ ಕುಮಾರರಾಮ’, ‘ಬೇರು’, ‘ರಾಕ್ಷಸ’, ‘ಓಂಕಾರ’, ‘ಕಿಚ್ಚ’, ‘ಸೈನಿಕ’, ‘ಕೃಷ್ಣ ಲೀಲೆ’, ‘ಹಾಲಿವುಡ್’, ‘ದಿಗ್ಗಜರು’ ಸೇರಿದಂತೆ ಅನೇಕ ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.


ದಿನೇಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ. ಆ.26ರಂದು ಬೆಳಿಗ್ಗೆ ಸುಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ‌ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


ಚಿತ್ರರಂಗದ ಸಂತಾಪ
ದಿನೇಶ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅನೇಕ ಕಲಾವಿದರು, ನಿರ್ದೇಶಕರು ಮತ್ತು ಅಭಿಮಾನಿಗಳು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.


ಕಲಾವಿದನಾಗಿ ಹಾಗೂ ಕಲಾ ನಿರ್ದೇಶಕನಾಗಿ ಎರಡು ಹಂತಗಳಲ್ಲಿ ಸೇವೆ ಸಲ್ಲಿಸಿದ ಅವರು ಸದಾ ಸ್ಮರಣೀಯರಾಗಿಯೇ ಉಳಿಯಲಿದ್ದಾರೆ.

Ads on article

Advertise in articles 1

advertising articles 2

Advertise under the article