Belthangadi: ಬುರುಡೆ ಚಿನ್ನಯ್ಯ ತಪ್ಪೊಪ್ಪಿಗೆ
Tuesday, September 23, 2025
ಲೋಕಬಂಧು ನ್ಯೂಸ್, ಬೆಳ್ತಂಗಡಿ
ಧರ್ಮಸ್ಥಳದಲ್ಲಿ ನಡೆದಿದ್ದ ವಿವಾದಾತ್ಮಕ 'ಬುರುಡೆ ಪ್ರಕರಣ' ಇದೀಗ ಮತ್ತೊಂದು ಮಹತ್ವದ ಘಟ್ಟ ತಲುಪಿದ್ದು, ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯ ಸೆ.23ರಂದು ಮಂಗಳವಾರ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.ಶಿವಮೊಗ್ಗ ಜೈಲಿನಲ್ಲಿದ್ದ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆರೋಪಿ ಚಿನ್ನಯ್ಯನನ್ನು ಅಪರಾಹ್ನ 3 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಬುರುಡೆ ಪ್ರಕರಣದ ಬಗ್ಗೆ ಹೇಳಿಕೆ ನೀಡಿ, ತಪ್ಪೊಪ್ಪಿಕೊಂಡಿದ್ದಾನೆ. ಆತನ ಸ್ವಯಂಪ್ರೇರಿತ ತಪ್ಪೊಪ್ಪಿಗೆ ಹೇಳಿಕೆಯನ್ನು ನ್ಯಾಯಾಧೀಶರು ದಾಖಲಿಸಿದ್ದಾರೆ. ಈ ಹೇಳಿಕೆ ಪ್ರಕರಣದ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.
ಪ್ರಕರಣದ ಆರಂಭದಲ್ಲಿ ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿ, ತಾನು ಮೃತ ದೇಹವೊಂದನ್ನು ಹೊರತೆಗೆದಿದ್ದು, ಅದಕ್ಕೆ ಸಂಬಂಧಿಸಿದ ತಲೆಬುರುಡೆಯನ್ನು ಒಪ್ಪಿಸಿದ್ದಾಗಿ ಹೇಳಿಕೊಂಡಿದ್ದ. ಅದು ತನಿಖಾಧಿಕಾರಿಗಳಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಆದರೆ, ವಿಶೇಷ ತನಿಖಾ ತಂಡ (ಎಸ್ಐಟಿ) ವಿಚಾರಣೆ ನಡೆಸಿದಾಗ ಆತ ತಲೆಬುರುಡೆ ಸಿಕ್ಕಿದ ಜಾಗವನ್ನು ತೋರಿಸಲು ಹಿಂದೇಟು ಹಾಕಿದ್ದ.
ನಂತರ, ತಾನು ತಲೆಬುರುಡೆಯನ್ನು ಹೊರತೆಗೆದಿಲ್ಲ ಎಂದು ತನ್ನ ಹಿಂದಿನ ಹೇಳಿಕೆಯನ್ನು ಬದಲಾಯಿಸಿದ್ದ. ಆ ಗೊಂದಲ ಮತ್ತು ಪರಸ್ಪರ ವಿರೋಧಾತ್ಮಕ ಹೇಳಿಕೆಗಳ ಕಾರಣ ಎಸ್ಐಟಿ ಆಗಸ್ಟ್ 23ರಂದು ಚಿನ್ನಯ್ಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಸೆ. 18ರಂದು ಕೂಡ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತಾದರೂ ಅಂದು ಹೇಳಿಕೆ ದಾಖಲಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಇದೀಗ ದಾಖಲಾಗಿರುವ ಚಿನ್ನಯ್ಯನ ತಪ್ಪೊಪ್ಪಿಗೆ ಹೇಳಿಕೆ ಪ್ರಕರಣದ ಸತ್ಯಾಂಶ ಹೊರತರಲು ಅತ್ಯಂತ ನಿರ್ಣಾಯಕವಾಗಲಿದೆ. ಈ ಹೇಳಿಕೆ ಮೃತ ದೇಹಗಳ ಅಸಲಿಯತ್ತು, ಅವುಗಳ ಮೂಲ ಮತ್ತು ಈ ಸಂಪೂರ್ಣ ಪ್ರಕರಣದಲ್ಲಿ ಚಿನ್ನಯ್ಯನ ಪಾತ್ರದ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸುವ ನಿರೀಕ್ಷೆ ಇದೆ.
ಈ ಹಿಂದೆ ತಲೆಬುರುಡೆ ಸಿಕ್ಕಿದ ಜಾಗ, ಅದರ ವೈಜ್ಞಾನಿಕ ವಿಶ್ಲೇಷಣೆ ಮತ್ತು ಇತರ ಸಾಕ್ಷ್ಯಗಳೊಂದಿಗೆ ಈ ಹೇಳಿಕೆಯನ್ನು ಹೋಲಿಸಿ ನೋಡಿದಾಗ ಪ್ರಕರಣದ ನಿಜಾಂಶ ಹೊರಬರಬಹುದು. ನ್ಯಾಯಾಲಯದ ಈ ಪ್ರಕ್ರಿಯೆಗಳು ಪ್ರಕರಣಕ್ಕೆ ಸಂಬಂಧಿಸಿದ ಹಲವು ಅನುಮಾನಗಳನ್ನು ನಿವಾರಿಸಿ, ಅಂತಿಮವಾಗಿ ನ್ಯಾಯ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಸಾರ್ವಜನಿಕರು ಆಶಿಸಿದ್ದಾರೆ.