23 ಕಂಬಳಗಳಿಗೆ ತಲಾ 5 ಲಕ್ಷ ಅನುದಾನ

ಲೋಕಬಂಧು ನ್ಯೂಸ್, ಬೆಳಗಾವಿ
ಕರಾವಳಿಯ ಸಾಂಸ್ಕೃತಿಯ ಹೆಮ್ಮೆ ಹಾಗೂ ಪಾರಂಪರಿಕ ಕ್ರೀಡೆಯಾದ ಕಂಬಳನ್ನು ಉತ್ತೇಜಿಸಲು ಸರ್ಕಾರ ದೊಡ್ಡ ಮಟ್ಟದ ಸಹಾಯ ಮುಂದುವರಿಸಿದ್ದು ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 23 ಕಂಬಳಗಳಿಗೆ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆಗೆ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಚಳಿಗಾಲದ ಅಧಿವೇಶನದಲ್ಲಿ ಮಾಹಿತಿ ನೀಡಿದರು.ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಅಶೋಕ್ ರೈ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, 2025–26ನೇ ಸಾಲಿನಲ್ಲಿ ನಡೆಯುವ ಕಂಬಳಗಳಿಗೆ ದ.ಕ. ಜಿಲ್ಲಾ ಕಂಬಳ ಸಮಿತಿ ಶಿಫಾರಸು ಮಾಡಿದ 23 ಕಾರ್ಯಕ್ರಮಗಳಿಗೆ ಅನುದಾನ ಮಂಜೂರು ಮಾಡಲಾಗಿದೆ. ಅನುದಾನ ಬಿಡುಗಡೆಗೆ ಸಂಬಂಧಿಸಿದ ಕಡತವನ್ನು ಈಗಾಗಲೇ ಹಣಕಾಸು ಇಲಾಖೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.


2024–25ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಮಂಗಳೂರು, ನರಿಂಗಾಣ, ಮೂಡುಬಿದಿರೆ, ಐಕಳ, ಜೆಪ್ಪು, ಪುತ್ತೂರು, ಬಂಟ್ವಾಳ, ಉಪ್ಪಿನಂಗಡಿ ಹಾಗೂ ವೇಣೂರು ಸೇರಿ 10 ಕಂಬಳಗಳಿಗೆ ತಲಾ 5 ಲಕ್ಷದಂತೆ 50 ಲಕ್ಷ ರೂ. ಬಿಡುಗಡೆ ಆಗಿದೆ ಎಂದರು.


ಕಂಬಳ ಪರಂಪರೆಯ ಸಂರಕ್ಷಣೆ
ಕರಾವಳಿ ಜನರ ಸಂಸ್ಕೃತಿ ಮತ್ತು ನಾಡಿನ ಗುರುತಾಗಿರುವ ಕಂಬಳ ಪರಂಪರೆಯನ್ನು ಉಳಿಸಿ, ಉತ್ತೇಜಿಸುವುದು ಸರ್ಕಾರದ ಕರ್ತವ್ಯ. ಸ್ಥಳೀಯ ಕ್ರೀಡೆ ಮತ್ತು ಗ್ರಾಮೀಣ ಸಂಸ್ಕೃತಿ ಸಂರಕ್ಷಣೆಗೆ ನಿಯಮಿತ ಅನುದಾನ ವ್ಯವಸ್ಥೆ ಮುಂದುವರಿಸಲಾಗುವುದು. ಕೃಷಿ ಸಂಸ್ಕೃತಿಗೆ ಆಧಾರವಾಗಿರುವ ಕಂಬಳಕ್ಕೆ ಸ್ಥಿರ ಆರ್ಥಿಕ ಬೆಂಬಲ ನೀಡುವ ನಿಲುವನ್ನು ಸಚಿವರು ಪುನರುಚ್ಚರಿಸಿದರು.


ಜನಪರ ಪರಂಪರೆ
ಕಂಬಳ ಕೇವಲ ಓಟವಲ್ಲ, ಅದು ಕರಾವಳಿ ಪ್ರದೇಶದ ಬೆಳೆ, ಭೂಮಿ, ಜಲ ಮತ್ತು ನಾಡಿನ ಸಂಸ್ಕೃತಿಯೊಂದಿಗಿನ ಜಾನಪದ ಹಬ್ಬ ಎಂದು ಸಚಿವ ಪಾಟೀಲ್ ವಿಶ್ಲೇಷಿಸಿದರು.