ಲೋಕಬಂಧು ನ್ಯೂಸ್, ನವದೆಹಲಿ
ಸರಕಾರಿ ಸಂಸ್ಥೆಗಳನ್ನು ಆರ್ಎಸ್ಎಸ್ ವಶಪಡಿಸಿಕೊಂಡಿದೆ ಎಂದು ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.ಲೋಕಸಭೆಯಲ್ಲಿ ಎಸ್ಐಆರ್ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು ಆರ್ಎಸ್ಎಸ್ ವಿರುದ್ಧ ಹರಿಹಾಯ್ದರು.
ಆರ್ಎಸ್ಎಸ್ ಸಮಾನತೆಯಲ್ಲಿ ನಂಬಿಕೆ ಇಡುವುದಿಲ್ಲ, ಶ್ರೇಣೀಕರಣದಲ್ಲಿ ನಂಬಿಕೆ ಇಡುತ್ತಾರೆ. ಮಹಾತ್ಮ ಗಾಂಧಿ ಹತ್ಯೆಯ ನಂತರ, ಭಾರತದ ಸಾಂಸ್ಥಿಕ ಚೌಕಟ್ಟನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವುದು ಆರ್ಎಸ್ಎಸ್ನ ಯೋಜನೆ ಎಂದರು.
ಇಸಿ, ಇಡಿ, ಸಿಬಿಐ ಮತ್ತಿತರ ಕೇಂದ್ರ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವ ಗುರಿಯನ್ನು ಆರ್.ಎಸ್.ಎಸ್. ಹೊಂದಿದೆ. ನಮ್ಮ ದೇಶದ ಚುನಾವಣಾ ವ್ಯವಸ್ಥೆಯನ್ನು ನೇರವಾಗಿ ನಿಯಂತ್ರಿಸುವ ಚುನಾವಣಾ ಆಯೋಗ ಕೂಡಾ ಕೇಂದ್ರ ಸರಕಾರದ ವಶದಲ್ಲಿದೆ ಎಂದು ರಾಹುಲ್ ನೇರ ಆರೋಪ ಮಾಡಿದರು.
ಅಧಿಕಾರದಲ್ಲಿ ಇರುವವರೊಂದಿಗೆ ಒಪ್ಪಂದ ಮಾಡಿಕೊಂಡು ಚುನಾವಣಾ ಆಯೋಗ ಚುನಾವಣೆಗಳನ್ನು ಹೇಗೆ ರೂಪಿಸುತ್ತಿದೆ ಎನ್ನುವುದಕ್ಕೆ ನಮ್ಮ ಬಳಿ ಪುರಾವೆಗಳಿದ್ದು, ಅವುಗಳನ್ನು ಒದಗಿಸಿದ್ದೇನೆ ಎಂದರು.