ದೊಡ್ಡಣಗುಡ್ಡೆ: ಪ್ರಸನ್ನಾಕ್ಷಿ ಪ್ರತಿಷ್ಠೆ, ಮಹಾಚಂಡಿಕಾ ಯಾಗ ಸಂಪನ್ನ
Tuesday, July 16, 2024
ದೊಡ್ಡಣಗುಡ್ಡೆ: ಪ್ರಸನ್ನಾಕ್ಷಿ ಪ್ರತಿಷ್ಠೆ, ಮಹಾಚಂಡಿಕಾ ಯಾಗ ಸಂಪನ್ನ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಗಾಯತ್ರಿ ಧ್ಯಾನಪೀಠದ ಕಪಿಲ ಮಹರ್ಷಿ ಸನ್ನಿಧಾನದಲ್ಲಿ ಪರಿವಾರ ಶಕ್ತಿಯಾಗಿ ಶ್ರೀ ಪ್ರಸನ್ನಾಕ್ಷಿ ದೇವಿ ಪ್ರತಿಷ್ಠಾಪನೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಆದ್ಯ ಗಣಪತಿ ಯಾಗ ಪಂಚ ವಿಂಶತಿ ಕಲಾಶಾರಾಧನೆ, ಪ್ರತಿಷ್ಠಾ ಪ್ರಧಾನ ಹೋಮಗಳು ಸಂಪನ್ನಗೊಂಡವು.
ಗತಕಾಲದಲ್ಲಿ ಕ್ಷೇತ್ರ ರಚನೆಗೆ ಕಾರಣೀಭೂತರಾಗಿ ತಪಸ್ಸನ್ನಾಚರಿಸಿದ ಶ್ರೀ ಕಪಿಲ ಮಹರ್ಷಿ ಸಾನ್ನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಕಾಮಧೇನು ವಿಶೇಷ ಪೂಜೆ ವೇ.ಮೂ. ಹೇರೂರು ಆನಂದ ಭಟ್ ನೆರವೇರಿಸಿದರು.
ವೇ.ಮೂ. ವಾಮನ ಭಟ್ ಪ್ರಧಾನತ್ವದಲ್ಲಿ ನಡೆದ ಮಹಾ ಚಂಡಿಕಾ ಯಾಗದಲ್ಲಿ ವೇ.ಮೂ. ಪೆರ್ಡೂರು ದಿನೇಶ್ ಅಡಿಗ, ವೇ.ಮೂ. ಸೀತಾರಾಮ ಭಟ್, ಹೆರ್ಗ ಗಣೇಶ್ ಭಟ್, ನಾಗಶಯನ, ಸ್ವಸ್ತಿಕಾಚಾರ್ಯ ಸಹಕರಿಸಿದರು.
ಮಹಾಚಂಡಿಕಾ ಯಾಗದಲ್ಲಿ ಬ್ರಾಹ್ಮಣ ಸುವಾಸಿನಿಯರು ಅಧಿಕ ಸಂಖ್ಯೆಯಲ್ಲಿ ಆರಾಧನೆ ಸ್ವೀಕರಿಸಿದರು.
ವಿಶೇಷ ಶೃಂಗಾರ ವಾದ್ಯ, ನಾದಸ್ವರ, ವಾದ್ಯ ಕೊಂಬು, ಕಹಳೆ, ಚಂಡೆ ವಾದನದೊಂದಿಗೆ ಶ್ರೀ ಪ್ರಸನ್ನಾಕ್ಷಿಯ ಪ್ರತಿಷ್ಠಾಪನೆ ನೆರವೇರಿತು.
ಕ್ಷೇತ್ರದಲ್ಲಿ ದುರ್ಗಾ ಆದಿಶಕ್ತಿಯನ್ನು ವಿಶೇಷವಾಗಿ ಶ್ರೀಯುತ ಆನಂದ ಬಾಯಿರಿ ಅಲಂಕರಿಸಿದರು. ಅವನೀಶಾಚಾರ್ಯ ಮಹಾಪೂಜೆ ನೆರವೇರಿಸಿದರು.
ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸಹಸ್ರ ಸಂಖ್ಯೆಗೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.