
ನಾಲ್ಕು ಕೃಷಿ ಡಿಪ್ಲೊಮಾ ಕಾಲೇಜು ಪುನರಾರಂಭ
Tuesday, July 16, 2024
ನಾಲ್ಕು ಕೃಷಿ ಡಿಪ್ಲೊಮಾ ಕಾಲೇಜು ಪುನರಾರಂಭ
ಲೋಕಬಂಧುನ್ಯೂಸ್ ಡೆಸ್ಕ್, ಬೆಂಗಳೂರು
ಹಿಂದಿನ ಸರ್ಕಾರದ ಅವಧಿಯಲ್ಲಿ ತಡೆಹಿಡಿಯಲಾಗಿದ್ದ ವಿವಿಧ ಕೃಷಿ ವಿ.ವಿ. ವ್ಯಾಪ್ತಿಯ ನಾಲ್ಕು ಡಿಪ್ಲೊಮಾ ಕಾಲೇಜುಗಳಿಗೆ ಮರು ಅನುಮತಿ ನೀಡಲಾಗಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಮಂಡ್ಯ ವಿ.ಸಿ ಫಾರ್ಮ್, ಶಿವಮೊಗ್ಗ ಕೃಷಿ ವಿ.ವಿ. ವ್ಯಾಪ್ತಿಯ ಉಡುಪಿ ಜಿಲ್ಲೆಯ ಬ್ರಹ್ಮಾವರ ಕಾಲೇಜು, ಧಾರವಾಡ ಕೃಷಿ ವಿ.ವಿ. ವ್ಯಾಪ್ತಿಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕಾಲೇಜು ಮತ್ತು ರಾಯಚೂರು ಕೃಷಿ ವಿ.ವಿ. ವ್ಯಾಪ್ತಿಯ ಬೀದರ್ ಕೃಷಿ ಡಿಪ್ಲೊಮಾ ಕಾಲೇಜುಗಳ ಪುನರಾರಂಭಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಕೃಷಿ ಡಿಪ್ಲೊಮಾ ಕೋರ್ಸ್ ಗಳ ಪುನರಾರಂಭಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ನಾಲ್ಕು ಕಾಲೇಜುಗಳಲ್ಲಿ ಪ್ರವೇಶಾತಿ ಪ್ರಾರಂಭಕ್ಕೆ ಅವಕಾಶ ಒದಗಿಸಿಕೊಡಲಾಗಿದೆ ಎಂದು ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.