
ಪಂಢರಪುರ ವಾರಕರೀ ಯಾತ್ರೆ
Tuesday, July 16, 2024
ಪಂಢರಪುರ ವಾರಕರೀ ಯಾತ್ರೆ
ಆಷಾಢ ಶುದ್ಧ ಏಕಾದಶಿ, ಭಗವಂತ ಯೋಗನಿದ್ರೆ ಆರಂಭಿಸುವ ಈ ಪವಿತ್ರ ದಿನದಂದು ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಪಂಢರಪುರಕ್ಕೆ ಆಗಮಿಸಿ ವಿಠ್ಠಲನ ದರ್ಶನ ಪಡೆಯುತ್ತಾರೆ.
ಲಕ್ಷಾಂತರ ಮಂದಿ ತಮ್ಮ ಮನೆಗಳಿಂದ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಾರೆ. ಕೀರ್ತನೆ, ಭಜನೆಗಳಲ್ಲಿ ತಣಿಯುತ್ತಾರೆ. ನಾವೆಲ್ಲ ಒಂದು ಎಂದು ಬೆರೆಯುತ್ತಾರೆ. ಆಷಾಢ ಶುದ್ಧ ಏಕಾದಶಿಯಂದು ವಿಠ್ಠಲನ ದರ್ಶನ ಪಡೆದು ನಡಿಗೆಯ ನೋವನ್ನೇ ಮರೆಯುತ್ತಾರೆ!
ಇದು ನಡಿಗೆ ಹಾಗೂ ನಾದೋಪಾಸನೆಗೆ ಇರುವ ಅದ್ಭುತ ಶಕ್ತಿ.
ತೀರ್ಥ ಕ್ಷೇತ್ರಗಳಿಗೆ ಕಾಲ್ನಡಿಗೆ ಮೂಲಕ ತೆರಳುವುದು ಒಂದು ದಿವ್ಯ ಅನುಭವ.
ಈ ಸಂಪ್ರದಾಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅದರಲ್ಲಿ ಪಂಢರಪುರಕ್ಕೆ ತೆರಳುವವರ ಸಂಖ್ಯೆ ಅಧಿಕ.
ನಾಮ ಸಂಕೀರ್ತನೆಯ ಸುಖದಲ್ಲಿ ನಡೆಯುವ ಇವರು ಜಾತಿ, ಜನಾಂಗದ ನಡುವಿನ ಭೇದ ಮರೆಯುತ್ತಾರೆ. ಬದುಕಿನುದ್ದಕ್ಕೂ ತ್ಯಾಗ, ಕ್ಷಮೆ, ಅನುಕಂಪ, ಶಾಂತಿ, ಅಹಿಂಸೆ, ಪ್ರೀತಿ, ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸರಳ ಜೀವನ ನಡೆಸುತ್ತಾರೆ. ಶಾಖಾಹಾರಿಗಳಾಗಿ ತುಳಸಿ ಮಾಲೆ ಧರಿಸುತ್ತಾರೆ. ಏಕಾದಶಿ ಉಪವಾಸ ವ್ರತ ಆಚರಿಸುತ್ತಾರೆ. ಹರಿಪಥ ಓದಿ, ಭಜನೆ ಕೀರ್ತನೆಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ.
ಬಿಂಬದಲ್ಲಿ ಭಗವಂತನ ಸ್ವರೂಪ ಕಂಡು ಸಂತೃಪ್ತಿ ಪಡುವ ಇವರಿಗೆ ಉಳಿದ ಭೋಗ ವಿಷಯಗಳು ಗೌಣವಾಗುತ್ತವೆ.
ಭಕ್ತಿಯ ನಡಿಗೆ ಅಂತರಂಗ ಶೋಧನೆಗೆ ಸಾಧಕ. ಇದು ನಡಿಗೆಗೆ ಇರುವ ದಿವ್ಯ ಶಕ್ತಿ.
ಪಂಡರಪುರದ ಯಾತ್ರೆ, ವಾರಕರಿ ಸಂಪ್ರದಾಯ
ಪಂಢರಪುರದಲ್ಲಿ ಆಷಾಢ, ಶ್ರಾವಣ, ಕಾರ್ತಿಕ ಹಾಗೂ ಮಾಘ ಮಾಸಗಳಲ್ಲಿ ಬೃಹತ್ ಉತ್ಸವ ನಡೆಯುತ್ತವೆ. ಈ ಸಂದರ್ಭದಲ್ಲಿ ಭಕ್ತರು ಕಾಲ್ನಡಿಗೆಯಿಂದ ಅಲ್ಲಿಗೆ ಆಗಮಿಸುತ್ತಾರೆ.
ವಿಶೇಷವಾಗಿ ಆಷಾಢ ಶುದ್ಧ ಏಕಾದಶಿಗೆ ಹೆಚ್ಚು ಭಕ್ತರು ಆಗಮಿಸುತ್ತಾರೆ. ಈ ಯಾತ್ರೆಗೆ 13ನೇ ಶತಮಾನದಷ್ಟು ಹಳೆಯ ಇತಿಹಾಸವಿದೆ. ಇದನ್ನು ವಾರಕರಿ ಸಂಪ್ರದಾಯ ಎನ್ನುತ್ತಾರೆ.
ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮ ಈ ಸಂಪ್ರದಾಯದಲ್ಲಿ ಬಂದ ಪ್ರಮುಖರು.
ಮುಂದೆ ಅಂದಾಜು 500 ವರ್ಷಗಳಿಂದ 50 ಜನ ಪ್ರಮುಖ ಸಂತರು ಆಗಿ ಹೋಗಿದ್ದಾರೆ ಎಂದು 18ನೇ ಶತಮಾನದಲ್ಲಿ ದಾಖಲಿಸಲಾಗಿದೆ.
ಅವರ ಹೆಸರಿನ ವಾರಕರಿ (ಗುಂಪು)ಗಳು ಇಂದಿಗೂ ಪಂಢರಪುರಕ್ಕೆ ಪಲ್ಲಕ್ಕಿಗಳನ್ನು ಹೊತ್ತು ಆಗಮಿಸುತ್ತವೆ.
ಸಂತ ತುಕಾರಾಮರ ಮಗ ನಾರಾಯಣ ಮಹಾರಾಜರು 1685ರಿಂದ ಈ ಪಲ್ಲಕ್ಕಿಗಳಲ್ಲಿ ಸಂತರ ಪಾದುಕೆ ಕೊಂಡೊಯ್ಯುವ ಸಂಪ್ರದಾಯಕ್ಕೆ ನಾಂದಿ ಹಾಡಿದರು.
1820ರಲ್ಲಿ ಹೈಬತ್ ಬಾಬಾ ಎಂಬ ಮುಸ್ಲಿಂ ಸಮುದಾಯದ ಸಂತ, ಈ ವಾರಕರಿ ಸಂಪ್ರದಾಯಕ್ಕೆ ಹೊಸರೂಪ ನೀಡಿದರು.
ವಾರಕರಿ ಸಂಪ್ರದಾಯದಲ್ಲಿ ಕಂಡುಬರುವ ಎರಡು ಪ್ರಮುಖ ಆಚರಣೆಗಳೆಂದರೆ ರಿಂಗಣ ಮತ್ತು ಧಾವಾ.
ಪಂಢರಪುರದಿಂದ 14 ಕಿ.ಮೀ .ದೂರದಲ್ಲಿರುವ ಬಂಡಿಸೇಗಾಂವ್ ಗ್ರಾಮದಲ್ಲಿ ಭಕ್ತರು ಒಂದು ವೃತ್ತ ನಿರ್ಮಿಸಿ ಮಧ್ಯೆ ಒಂದು ಕುದುರೆಯ ಮೇಲೆ ಸಂತರ ಪಾದುಕೆಗಳನ್ನಿಟ್ಟು ವೃತ್ತಾಕಾರದಲ್ಲಿ ಓಡುವ ಕುದುರೆ ಹಿಂದೆ ಸಾಗುತ್ತಾರೆ. ಕುದುರೆ ಓಡುವಾಗ ಅದರ ಕಾಲಿನಿಂದ ಬರುವ ಧೂಳನ್ನು ನೊಸಲಿಗೆ ಹಚ್ಚಿಕೊಳ್ಳುತ್ತಾರೆ. ಇದು ಸಂತರ ಪಾದದ ಧೂಳು ಎಂಬುದು ನಂಬಿಕೆ. ಇದನ್ನೇ ರಿಂಗಣ ಎನ್ನುತ್ತಾರೆ.
ಇನ್ನು ಪಂಢರಪುರ 25 ಕಿ.ಮೀ. ಇರುವಂತೆ ಅಂದರೆ ಬೋಂಡ್ಲೆ ಗ್ರಾಮದಿಂದ ಪಾದಯಾತ್ರೆ ವೇಗ ಹೆಚ್ಚುತ್ತದೆ.
ದೇವರು ದರ್ಶನ ನೀಡಲು ನಿಂತಿದ್ದಾನೆ ಎಂದು ಭಕ್ತಿಯ ಉನ್ಮಾದದಲ್ಲಿ ಜನ ಓಡುತ್ತ ಬಂದು ವಿಠ್ಠಲನ ದರ್ಶನ ಪಡೆಯುತ್ತಾರೆ. ಇದನ್ನು ಧಾವಾ ಎನ್ನುತ್ತಾರೆ.
ಹೀಗೆ ಓಡುತ್ತ ಬಂದು ಮೊದಲು ಪಂಢರಪುರ ತಲುಪುವ ವಾರಕರಿ ತಂಡದ ಮುಖ್ಯಸ್ಥರನ್ನು ಆಷಾಢ ಶುದ್ಧ ಏಕಾದಶಿ ದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಸಲ್ಲಿಸುವ ವಿಶೇಷ ಪೂಜೆ ಸಂದರ್ಭದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಈ ಸಂಪ್ರದಾಯ 1996ರಿಂದ ನಡೆದುಕೊಂಡು ಬಂದಿದೆ.
ಪ್ರಸಿದ್ಧ ಪಲ್ಲಕ್ಕಿ
ಪಂಢರಪುರಕ್ಕೆ ಪಲ್ಲಕ್ಕಿ ಹೊತ್ತು ಪಾದಯಾತ್ರೆ ಮೂಲಕ ಬರುವುದು ಸಂಪ್ರದಾಯ. ಅಳಂದದಿಂದ ಜ್ಞಾನೇಶ್ವರ ಮಹಾರಾಜ ಭಕ್ತರು, ದೇಹುದಿಂದ ತುಕಾರಾಮರ ಭಕ್ತರು, ಪೈಠಣದಿಂದ ಏಕನಾಥರ ಭಕ್ತರು, ತ್ರಯಂಬಕೇಶ್ವರದಿಂದ ನಿವೃತ್ತಿನಾಥರ ಭಕ್ತರು, ಮುಕ್ತಿನಗರದಿಂದ ಮುಕ್ತಾಬಾಯಿ ಭಕ್ತರು, ಶೇಗಾಂವದಿಂದ ಗಜಾನನ ಮಹಾರಾಜರ ಭಕ್ತರು, ಸಾಸವಾಡದಿಂದ ಸೋಪಾನ ಮಹಾರಾಜರ ಭಕ್ತರು ಪಲ್ಲಕ್ಕಿ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ.
ಪ್ರಸ್ತುತ ವಿವಿಧ ಸ್ಥಳಗಳಿಂದ ಅಂದಾಜು 40 ಪಲ್ಲಕ್ಕಿಗಳು ಉತ್ಸವ ಸಂದರ್ಭದಲ್ಲಿ ಪಂಢರಪುರಕ್ಕೆ ಆಗಮಿಸುತ್ತವೆ.