Udupi: ದಸರಾ ಪರಿಪೂರ್ಣ ಹಬ್ಬ
Tuesday, September 23, 2025
ಲೋಕಬಂಧು ನ್ಯೂಸ್, ಉಡುಪಿ
ದಸರಾ ಪರಿಪೂರ್ಣ ಹಬ್ಬ, ಎಲ್ಲಾ ದೇವತೆಗಳಿಗೆ ಪೂಜೆ ಸಲ್ಲುವ ಏಕೈಕ ಹಬ್ಬ. ಉಡುಪಿಯ ದಸರಾ ದಶಮ ವರ್ಷಗಳನ್ನು ಪೂರ್ಣಗೊಳಿಸಿದ್ದು, ಸಾಂಸ್ಕೃತಿಕ- ಧಾರ್ಮಿಕ ರಾಜಧಾನಿಯಾಗಿರುವ ಉಡುಪಿ ಸಾಂಸ್ಕೃತಿಕವಾಗಿ ಪರಿಪೂರ್ಣವಾಗಿದೆ ಎಂದರ್ಥ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.ಸೋಮವಾರ ಸಂಜೆ ಕೃಷ್ಣಮಠದ ರಾಜಾಂಗಣದಲ್ಲಿ ಉಡುಪಿ ಶಾರದೋತ್ಸವ- ಉಡುಪಿ ದಸರಾ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ನಡೆಸುವವರಿಗೆ ತಕ್ಕ ಉತ್ತರ ನೀಡುವ ಕಾಲ ಬಂದಿದೆ. ಅದಕ್ಕೆ ಹಿಂದೂಗಳು ಒಗ್ಗಟ್ಟಾಗಬೇಕಾಗಿದೆ. ದಸರಾದಂಥ ಕಾರ್ಯಕ್ರಮಗಳು ಹಿಂದೂಗಳ ಒಗ್ಗಟ್ಟನ್ನು ಹೆಚ್ಚಿಸುತ್ತವೆ ಎಂದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಕರ್ಣಾಟಕ ಬ್ಯಾಂಕ್ ಉಡುಪಿ ಶಾಖಾ ಪ್ರಬಂಧಕ ಚಂದ್ರಶೇಖರ ಆಳ್ವ ಶುಭಾಶಂಸನೆಗೈದರು.
ಇದೇ ಸಂದರ್ಭದಲ್ಲಿ ಶಾರದೆಯ ಚಿತ್ರ ಬರೆಯುವ ಸ್ಪರ್ಧಾ ವಿಜೇತರಿಗೆ ಪರ್ಯಾಯ ಶ್ರೀಪಾದರು ಬಹುಮಾನ ವಿತರಿಸಿ, ತೀರ್ಪುಗಾರರನ್ನು ಗೌರವಿಸಿದರು.
ಉಡುಪಿ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಭಟ್, ರಾಧಾಕೃಷ್ಣ ಮೆಂಡನ್, ಮತ್ತು ತಾರಾ ಉಮೇಶ್ ಆಚಾರ್ಯ, ಕೋಶಾಧಿಕಾರಿ ಸತೀಶ್ ಕುಮಾರ್ ಸಹಕರಿಸಿದರು.
ಸಂತೋಷ್ ಶೆಟ್ಟಿ ಎಳ್ಳಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.