ಲೋಕಬಂಧು ನ್ಯೂಸ್, ಮೈಸೂರು
ಮೈಸೂರು ವಸ್ತು ಪ್ರದರ್ಶನ ಆವರಣದಲ್ಲಿ ದೇಶೀಯ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ನಿರ್ಮಾಣಗೊಳ್ಳಬೇಕಿದ್ದ ‘ಯೂನಿಟಿ ಮಾಲ್’ ಯೋಜನೆ ಆರಂಭದಲ್ಲೇ ವಿಘ್ನ ಕಂಡಿದ್ದು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗುದ್ದಲಿ ಪೂಜೆ ನೆರವೇರಿಸಿದ ನಿರ್ಮಾಣ ಕಾರ್ಯಕ್ಕೆ, ಅವರ ತಾಯಿ ಹಾಗೂ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಡೆಯಾಜ್ಞೆ ತಂದು ವಿರೋಧ ವ್ಯಕ್ತಪಡಿಸಿದ್ದಾರೆ.ಕರ್ನಾಟಕ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದ ಸರ್ವೇ ನಂ.1ರಲ್ಲಿ 6.5 ಎಕರೆ ಪ್ರದೇಶದಲ್ಲಿ 193 ಕೋಟಿ ರೂ. ವೆಚ್ಚದ ಪಿಪಿಪಿ ಮಾದರಿಯಲ್ಲಿ ಯೋಜನೆಯ ನಿರ್ಮಾಣ ಪ್ರಕ್ರಿಯೆ ಆರಂಭವಾಗಿತ್ತು. ಈ ಜಾಗದ ಸ್ವಾಮ್ಯ ಹಾಗೂ ಬಳಕೆ ಹಕ್ಕು ಕುರಿತ ವಿವಾದವನ್ನು ಪ್ರಮೋದಾದೇವಿ ಒಡೆಯರ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಸಂಬಂಧಿತ ಜಾಗದಲ್ಲಿ ಯಾವುದೇ ರೀತಿಯ ನಿರ್ಮಾಣ ಕಾರ್ಯ ಕೈಗೊಳ್ಳಬಾರದು. ಯಥಾಸ್ಥಿತಿ ಕಾಪಾಡಬೇಕು ಎಂದು ಕೋರ್ಟ್ ತಿಳಿಸಿದೆ.
ಕರಕುಶಲ ಕರ್ಮಿಗಳಿಗೆ ಮಾರುಕಟ್ಟೆ ಒದಗಿಸುವುದು ಯೂನಿಟಿ ಮಾಲ್ನ ಪ್ರಮುಖ ಉದ್ದೇಶವಾಗಿತ್ತು. ಕರಕುಶಲ ಉತ್ಪನ್ನಗಳಿಗೆ ಒಂದೇ ವೇದಿಕೆಯಲ್ಲಿ ಮಾರಾಟ ವ್ಯವಸ್ಥೆ, ಸ್ಥಳೀಯ ಕೌಶಲ್ಯ, ಹಸ್ತಕಲೆ, ಗೃಹೋತ್ಪನ್ನ, ದೇಸಿ ಬ್ರ್ಯಾಂಡ್ಗಳಿಗೆ ನೇರ ಮಾರುಕಟ್ಟೆ, ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಸ್ವಾವಲಂಬನೆ ಇತ್ಯಾದಿ ಯೂನಿಟಿ ಮಾಲ್ ಮೂಲಕ ಸುಮಾರು ಸಾವಿರಕ್ಕೂ ಹೆಚ್ಚು ಕರಕುಶಲ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಲಾಗಿತ್ತು.