ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಅಹೋರಾತ್ರಿ ಶಿವಪಂಚಾಕ್ಷರಿ ಪಠನಕ್ಕೆ ಚಾಲನೆ

ಉಜಿರೆ| ಲೋಕಬಂಧು ನ್ಯೂಸ್
ಮಹಾಶಿವರಾತ್ರಿ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಭಾನುವಾರ ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿ ದೀಪ ಬೆಳಗಿಸಿ ಅಹೋರಾತ್ರಿ ಶಿವಪಂಚಾಕ್ಷರಿ ಪಠನಕ್ಕೆ ಚಾಲನೆ ನೀಡಿದರು.
'ಸರ್ವೇಜನಾಃ ಸುಖಿನೋ ಭವಂತು' ಎಲ್ಲರಿಗೂ ಸುಖ-ಶಾಂತಿ, ನೆಮ್ಮದಿಯೊಂದಿಗೆ ಸನ್ಮಂಗಳವಾಗಲಿ ಎಂದು ಡಾ. ಹೆಗ್ಗಡೆ ಹಾರೈಸಿದರು. ಬಳಿಕ ಎಲ್ಲರೂ ಸಾಮೂಹಿಕವಾಗಿ 'ಓಂ ನಮಃ ಶಿವಾಯ' ಪಠನ ಮಾಡಿದರು.
ಎಲ್ಲರೂ ಶ್ರದ್ಧಾ-ಭಕ್ತಿಯಿಂದ ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸಿ ಧನ್ಯತೆಯನ್ನು ಹೊಂದಿರುವಿರಿ. ನಿಮ್ಮ ಎಲ್ಲಾ ಕಷ್ಟಗಳನ್ನು ಶಿವನಿಗೆ ಅರ್ಪಿಸಿ, ಸುವಿಚಾರಗಳನ್ನು ಮಾತ್ರ ಕೊಂಡು ಹೋಗಿ. ವಿಷಕಂಠನಾದ ಶಿವನಿಗೆ ಮಾತ್ರ ಹಾಲಾಹಲ ಸ್ವೀಕರಿಸುವ ಸಾಮರ್ಥ್ಯವಿದೆ. ನನಗೆ ಎಂದು ವೈಯಕ್ತಿಕವಾಗಿ ಸುಖಕ್ಕಾಗಿ ಪ್ರಾರ್ಥಿಸುವ ಬದಲು ನಮಗೆ, ಸಮಸ್ತ ಸಮಾಜಕ್ಕೆ ಕಲ್ಯಾಣವಾಗಲಿ ಎಂಬ ಪ್ರಾರ್ಥನೆ ನಿಮ್ಮದಾಗಲಿ ಎಂದರು.
ಪಾದಯಾತ್ರೆಯ ರೂವಾರಿ ಗುರು ಹನುಮಂತಪ್ಪ ಮತ್ತು ಮರಿಯಪ್ಪ ನೇತೃತ್ವದಲ್ಲಿ ಏಳು ಮಂದಿಯೊಂದಿಗೆ ಪ್ರಾರಂಭವಾದ ಪಾದಯಾತ್ರೆ ಇಂದು 70 ಸಾವಿರ ಮಂದಿ ಪಾದಯಾತ್ರಿಗಳು ಬೆಂಗಳೂರು ಮೊದಲಾದ ಕಡೆಗಳಿಂದ ಶನಿವಾರ ಧರ್ಮಸ್ಥಳಕ್ಕೆ ಬಂದಿದ್ದರು. ಎಲ್ಲರಿಗೂ ಶ್ರೀ ಸ್ವಾಮಿಯ ದರ್ಶನ, ಸೇವೆಯ ಫಲ ದೊರೆತು ಲೋಕಕಲ್ಯಾಣವಾಗಲಿ ಎಂದು ಹೆಗ್ಗಡೆಯವರು ಹಾರೈಸಿದರು.


ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದು ಶಿವಪಂಚಾಕ್ಷರಿ ಪಠನದಲ್ಲಿ ಭಾಗವಹಿಸಿದರು. ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಪಾದಯಾತ್ರೆಯ ರೂವಾರಿ ಗುರು ಹನುಮಂತಪ್ಪ ಮತ್ತು ಮರಿಯಪ್ಪ ಉಪಸ್ಥಿತರಿದ್ದರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
ಅಹೋರಾತ್ರಿ ಶಿವಪಂಚಾಕ್ಷರಿ ಪಠನ ನಡೆಯಿತು. ಭಕ್ತರು ದೇವರ ದರ್ಶನ ಮಾಡಿ ವಿಶೇಷವಾಗಿ ಎಳನೀರಿನ ಅಭಿಷೇಕ ಮತ್ತು ಶತರುದ್ರಾಭಿಷೇಕ ಸೇವೆ ಸಲ್ಲಿಸಿ ಧನ್ಯತೆ ಹೊಂದಿದರು. ದೇವಸ್ಥಾನದ ಪರಿಸರವಿಡೀ ಶಿವಪಂಚಾಕ್ಷರಿ ಪಠ ಅನುರಣಗೊಂಡಿತು. ಆಕರ್ಷಕ ವಿನ್ಯಾಸದಲ್ಲಿ ವಿದ್ಯುದ್ದೀಪಗಳಿಂದ  ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಅಲಂಕೃತಗೊಂಡಿತ್ತು.


ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉಪಸ್ಥಿರಿದ್ದು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.


ಭಕ್ತರಿಂದ ಅನ್ನದಾಸೋಹ
ಬೆಂಗಳೂರಿನ ಭಕ್ತರು 1.75 ಲಕ್ಷ ಮಂದಿಗೆ ಉಚಿತವಾಗಿ ಅನ್ನದಾಸೋಹ ಮಾಡಿ ಧನ್ಯತೆ ಹೊಂದಿದರು. ಅನ್ನಪೂರ್ಣ ಭೋಜನಾಲಯದ ಹಿಂಬದಿಯ ಮೈದಾನ ಮತ್ತು ಹೈಸ್ಕೂಲು ಕ್ರೀಡಾಂಗಣದಲ್ಲಿ ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಲಾಯಿತು.
ಬೆಂಗಳೂರಿನ ಶ್ರೀನಿವಾಸ ರೆಡ್ಡಿ ಮತ್ತು ಬಳಗ (80 ಸ್ವಯಂಸೇವಕರು) ಯಲಹಂಕದ  ತಿಮ್ಮಾ ರೆಡ್ಡಿ, ಮತ್ತು ಬಳಗ (50 ಸ್ವಯಂಸೇವಕರು) ಆನೇಕಲ್ ಮುನಿರೆಡ್ಡಿ  ಮತ್ತು ಬಳಗ (50 ಸ್ವಯಂಸೇವಕರು), ಹೊಸೂರು ರಾಜ ರೆಡ್ಡಿ ಮತ್ತು ಬಳಗ (50 ಸ್ವಯಂಸೇವಕರು), ಆನೇಕಲ್ ಗೋಪಾಲ ರೆಡ್ಡಿ  ಮತ್ತು ಬಳಗ (50 ಸ್ವಯಂಸೇವಕರು), ಮಾಲೂರು ರಾಮಕೃಷ್ಣ ಮತ್ತು ಬಳಗ (30 ಸ್ವಯಂಸೇವಕರು), ಸರ್ಜಾಪುರ ಬಸವರಾಜ ಮತ್ತು ಬಳಗ (50 ಸ್ವಯಂಸೇವಕರು), ನಾಗರಬಾವಿ ಪುಷ್ಪ ಮಂಜು ಬಳಗ (50 ಸ್ವಯಂಸೇವಕರು), ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸೇವಾ ಸಮಿತಿ ಬೀರೂರು (25 ಸ್ವಯಂಸೇವಕರು), ಶ್ರೀಕ್ಷೇತ್ರ ಧರ್ಮಸ್ಥಳ ಅನ್ನಸಂತರ್ಪಣಾ ಸಮಿತಿ, ನಾಗರಬಾವಿ ಬೆಂಗಳೂರು (100 ಸ್ವಯಂಸೇವಕರು), ಕೃಷ್ಣ ರೆಡ್ಡಿ ಆನೇಕಲ್ ಬೆಂಗಳೂರು (100 ಸ್ವಯಂಸೇವಕರು), ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸೇವಾ ಸಮಿತಿ ಮಲ್ಲೇಶ್ವರಂ ಬೆಂಗಳೂರು (50 ಸ್ವಯಂಸೇವಕರು) ಒಟ್ಟು 12 ತಂಡಗಳಲ್ಲಿ 635 ಸ್ವಯಂಸೇವಕರು 1.75 ಲಕ್ಷ ಮಂದಿಗೆ ಅನ್ನದಾಸೋಹ ಸೇವೆ ಅರ್ಪಿಸಿದರು.


ಅನ್ನದಾಸೋಹದ ಮೆನು
ಊಟಕ್ಕೆ ಅನ್ನ, ಸಾರು, ಸಾಂಬಾರು, ಪಲ್ಯ, ಮೊಸರನ್ನ, ರಾಗಿ ಮುದ್ದೆ, ಪಾಯಸ, ಬೂಂದಿ, ಮಸಾಲಪುರಿ.


ಉಪಾಹಾರಕ್ಕೆ ಉಪ್ಪಿಟ್ಟು, ಶೀರ, ಪಲಾವ್, ಮೊಸರನ್ನ, ಕೇಸರಿಬಾತ್, ಬಿಸಿಬೇಳೆಬಾತ್, ಅವರೆಕಾಳು, ಮಸಾಲಪುರಿ.