ಪಠ್ಯದಲ್ಲಿ ಗೀತೆ ಬೇಡ ಎನ್ನುವವರು ಮೂರ್ಖರು

ಲೋಕಬಂಧು ನ್ಯೂಸ್, ಉಜಿರೆ
ಪ್ರಾಚೀನ ಕಾಲದ ಗುರುಕುಲ ಶಿಕ್ಷಣ ಪದ್ಧತಿಗೂ ಆಧುನಿಕ ಶಿಕ್ಷಣ ಪದ್ಧತಿಗೂ ಅಜಗಜಾಂತರವಿದೆ. ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಬಾರದು ಎಂದು ಹೇಳುವ ಎಲ್ಲವನ್ನೂ ಬಲ್ಲವರೆಂಬ ಸ್ವಯಂಘೋಷಿತ ಬುದ್ಧಿಜೀವಿಗಳು ಮೂರ್ಖರು ಎಂದು ಖ್ಯಾತ ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಹೇಳಿದರು.ಇಲ್ಲಿನ ಎಸ್.ಡಿ.ಎಂ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕನ್ನಡ ವಿಭಾಗ ಆಶ್ರಯದಲ್ಲಿ ಕೀರ್ತಿಶೇಷ ಡಾ.ಬಿ. ಯಶೋವರ್ಮ ಸ್ಮರಣಾರ್ಥ ಆಯೋಜಿಸಿದ 'ಅರಿವಿನ  ದೀವಿಗೆ' ಕಾರ್ಯಕ್ರಮದಲ್ಲಿ 'ಭಗವದ್ಗೀತೆ ಮತ್ತು ಶಿಕ್ಷಣ' ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಪ್ರಾಚೀನ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಶಬ್ದದ ವ್ಯುತ್ಪತ್ತಿ, ವ್ಯಾಕರಣ, ಛಂದಸ್ಸು, ಭೂಗರ್ಭಶಾಸ್ತ್ರ, ರಾಶಿವಿದ್ಯೆ, ಕ್ಷಾತ್ರವಿದ್ಯೆ, ವೇದ- ಉಪನಿಷತ್ತುಗಳು, ಗಂಧರ್ವ ವಿದ್ಯೆ ಕಲಿಸುತ್ತಿದ್ದರು. ಆದರೆ, ಇಂದು ಪಾಶ್ಚಾತ್ಯ ಶಿಕ್ಷಣ ಪದ್ಧತಿಯ ಅಂಧಾನುಕರಣೆಯಿಂದ ಗುರುಮುಖೇನ ಕಲಿಯುವ ವಿದ್ಯೆ ಕೇವಲ  ಉದ್ಯೋಗ, ಹಣ ಮತ್ತು  ಕೀರ್ತಿ ಸಂಪಾದನೆಗಾಗಿ ಪರೀಕ್ಷೆ ಕೇಂದ್ರಿತ ಅಂಕಗಳಿಗಾಗಿ ಒತ್ತಡದ ಶಿಕ್ಷಣವಾಗಿದೆ.


ಸ್ಮರಣಶಕ್ತಿಗಾಗಿ ಕೇವಲ ಗಿಳಿ ಬಾಯಿಪಾಠ ಬದುಕಿಗೆ ಪ್ರಯೋಜನವಿಲ್ಲ. ಆತ್ಮ, ಜೀವ ಮತ್ತು ಜೀವನಕ್ಕೆ ಸಂಬಂಧಿಸಿದ ಶಿಕ್ಷಣ ಅಗತ್ಯ. ರಾಮಾಯಣ, ಮಹಾಭಾರತ ಹಾಗೂ ಪುರಾಣಗಳ ಬಗ್ಗೆ ಓದದೆ 'ರೈಲು' ಬಿಡುವವರ ಕೆಟ್ಟ ಪರಂಪರೆ ಬೆಳೆಯುತ್ತಿದೆ ಎಂದವರು ವಿಷಾದಿಸಿದರು.


ಕರ್ತವ್ಯದ ದೃಷ್ಟಿಯಿಂದ ಸೋಲು-ಗೆಲುವಿನ ಬಗ್ಗೆ ಚಿಂತಿಸದೆ ಪ್ರತಿಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಬೇಕು ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಗುರು ಶಿಷ್ಯನ ದೌರ್ಬಲ್ಯಗಳನ್ನು ಗುರುತಿಸಿ, ಆತನಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಬೇಕು. ಶಿಷ್ಯರಲ್ಲಿಯೂ ಪ್ರಾಮಾಣಿಕತೆ, ನಿಷ್ಠೆ ಮತ್ತು ಬದ್ಧತೆ ಇರಬೇಕು. 'ನಾನು' ಎಂಬ ಅಂಹಕಾರ, ಮಮಕಾರ ತ್ಯಜಿಸಬೇಕು.


ಕ್ರೀಡೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಆರೋಗ್ಯ ರಕ್ಷಣೆಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕು ಎಂದವರು ಸಲಹೆ ನೀಡಿದರು.


ತಂದೆ-ತಾಯಿ ಮತ್ತು ಗುರುಗಳು ಮಕ್ಕಳ ಆಸಕ್ತಿ, ಪ್ರತಿಭೆ ಮತ್ತು ಹವ್ಯಾಸಗಳನ್ನು ಗುರುತಿಸಿ ಪ್ರೊತ್ಸಾಹಿಸಿದಾಗ ಮಾತ್ರ ಶಿಕ್ಷಣದ ಮೂಲಕ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಬಹುದು. ಧ್ಯಾನ, ಭಕ್ತಿಯ ಮೂಲಕ ಪರಮ ಸತ್ಯಗಳನ್ನು ಸೋತವರಿಗೆ ತಿಳಿಸಿದಾಗ ಭಗವಂತನ ಸಾಕ್ಷಾತ್ಕಾರ ಸಾಧ್ಯ. ಭಗವದ್ಗೀತೆ, ವೇದ, ಪುರಾಣಗಳನ್ನು ಅಧ್ಯಯನ ಮಾಡಿ ರಾಮ- ಕೃಷ್ಣರಂಥ ಮಹಾಪುರುಷರ ಸದ್ಗುಣಗಳನ್ನು ನಾವು ಅನುಷ್ಠಾನಗೊಳಿಸಿದಾಗ ಜೀವನ ಪಾವನವಾಗುತ್ತದೆ. ತನ್ಮೂಲಕ ಲೋಕ ಕಲ್ಯಾಣವಾಗುತ್ತದೆ ಎಂದು ವೀಣಾ ಬನ್ನಂಜೆ ಹೇಳಿದರು.


ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾ ವರ್ಮ, ಪೂರನ್‌ ವರ್ಮ ಉಪಸ್ಥಿತರಿದ್ದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್. ಸತೀಶ್ಚಂದ್ರ, ಕಾಲೇಜಿನ  ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ., ಡಾ. ಪ್ರದೀಪ್ ನಾವೂರು ಮೊದಲಾದವರಿದ್ದರು.


ಡಾ.ಶ್ರೀಧರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ದಿವ ಕೊಕ್ಕಡ ಉಪಸ್ಥಿತರಿದ್ದು ಸಹಕರಿಸಿದರು.