ಲೋಕಬಂಧು ನ್ಯೂಸ್ | ಉಡುಪಿ, ಮಾ.16
ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ನಿರ್ಮಿಸುತ್ತಿರುವ ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಡಾ. ಗೋವಿಂದಾಚಾರ್ಯರ ಜೀವನ ಚರಿತ್ರೆ ಆಧರಿತ ಇಂದು ಎನಗೆ ಗೋವಿಂದ ಚಲನಚಿತ್ರದ ಮುಹೂರ್ತ ನಗರದ ರಥಬೀದಿಯ ಅದಮಾರು ಮಠದ ಆವರಣದಲ್ಲಿ ಸೋಮವಾರ ಅಭಿಜಿನ್ಮುಹೂರ್ತದಲ್ಲಿ ನಡೆಯಿತು.
ಕಾರ್ತಿಕ್ ಸರಗೂರು ನಿರ್ದೇಶನದಲ್ಲಿ ನಿರ್ಮಾಣವಾಗಲಿರುವ ಚಲನ ಚಿತ್ರದ ಮುಹೂರ್ತವನ್ನು ಪರ್ಯಾಯ ಪೀಠಾಧೀಶ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉದ್ಘಾಟಿಸಿ ಶುಭ ಹಾರೈಸಿ, ಡಾ.ಬನ್ನಂಜೆ ಕುರಿತ ಚಲನಚಿತ್ರ ಎಲ್ಲರಿಗೂ ಪ್ರಭಾವ ಬೀರಲಿ ಎಂದು ಆಶಿಸಿದರು.
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಛಾಯಾಗ್ರಹಣಕ್ಕೆ ಚಾಲನೆ ನೀಡಿ, ದೇಶ- ವಿದೇಶಗಳಲ್ಲೂ ಬನ್ನಂಜೆಯವರ ದೊಡ್ಡ ಶಿಷ್ಯ ಬಳಗ ಇದೆ. ನಾವು ಅರಂಭಿಸಿದ `ಸುಗುಣಮಾಲಾ'ದಲ್ಲಿ ಅವರು ಬರೆದ ವೇದಗಳ ಸಂದೇಶ ಶತಮಾನದಲ್ಲೇ ಬಂದ ಅಮೂಲ್ಯ ಸಂದೇಶ ಎಂದು ಸ್ಮರಿಸಿದರು.
ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಕ್ಲಾಪ್ ಫಲಕ ಅನಾವರಣಗೊಳಿಸಿ, ಡಾ.ಬನ್ನಂಜೆ ಎಲ್ಲ ಸಾಧಕರಿಗೂ ಜ್ಞಾನದ ಹಸಿವು ತಣಿಸಿದ ಧೀಮಂತರು ಎಂದು ಬಣ್ಣಿಸಿದರು.
ವಿದ್ವಾಂಸ ಡಾ.ಕೃಷ್ಣರಾಜ ಭಟ್ ಕುತ್ಪಾಡಿ ಸ್ವಾಗತಿಸಿ, ನಿರೂಪಿಸಿದರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ವಿಶ್ವಸ್ಥೆ ಡಾ.ವೀಣಾ ಬನ್ನಂಜೆ ವಂದಿಸಿದರು.

