ಬಂಗಾರಮಕ್ಕಿ ಮಾರುತಿ ಗುರೂಜಿ ಚಾತುರ್ಮಾಸ ಸಮಾಪನ

ಲೋಕಬಂಧು ವಾರ್ತೆ
ಹೊನ್ನಾವರ, ಸೆ.30: ಶ್ರೀಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನಯಸ್ವಾಮಿ ಆರಾಧಕ ಶ್ರೀ ಮಾರುತಿ ಗುರೂಜಿ ಅವರ ಚಾತುರ್ಮಾಸ್ಯ ವ್ರತದ ಸೀಮೋಲ್ಲಂಘನ ಭಾದ್ರಪದ ಶುಕ್ಲ ಹುಣ್ಣಿಮೆ ಶುಕ್ರವಾರ ನಡೆಯಿತು.
ಹೋಮ, ಹವನಾದಿಗಳನ್ನು ನಡೆಸಿ, ಶರಾವತಿ ನದಿಗೆ ತೆರಳಿ ಗಂಗಾಪೂಜೆ ಸಲ್ಲಿಸುವ ಮೂಲಕ ಚಾತುರ್ಮಾಸ ವ್ರತ ಸಮಾಪನಗೊಳಿಸಲಾಯಿತು.
ಈ ಸಂದರ್ಭದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಯಾದವಗಿರಿ ಶಂಕರ ಸಂಸ್ಥಾನಮ್ ಪೀಠದ ಶ್ರೀ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಭ್ಯಾಗತರಾಗಿದ್ದ ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಶ್ರೀಕ್ಷೇತ್ರದೊಂದಿಗಿನ ತನ್ನ ಬಹುಕಾಲದ ಸಂಬಂಧ ಸ್ಮರಿಸಿ, ಗುರೂಜಿಯವರ ಶಿಕ್ಷಣ, ಸಾಮಾಜಿಕ ಕ್ಷೇತ್ರಗಳ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗುರೂಜಿಯವರ ಶಿಷ್ಯ- ಭಕ್ತ ವೃಂದ, ಶ್ರೀಕ್ಷೇತ್ರದ ಸಿಬ್ಬಂದಿ, ವಿದ್ಯಾರ್ಥಿಗಳು, ಸ್ಥಳೀಯರು, ಗುರುವಂದನೆ ಸಲ್ಲಿಸಿ, ಮಾರುತಿ ಗುರೂಜಿ ಆಶೀರ್ವಚನ ಆಲಿಸಿ, ಮಂತ್ರಾಕ್ಷತೆ ಸ್ವೀಕರಿಸಿದರು.

ಬಳಿಕ ಮಂಗಳೂರಿನ ಹೆಜ್ಜೆನಾದ ತಂಡದವರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಹಾಗೂ ಖ್ಯಾತ ಯಕ್ಷಗಾನ ಕಲಾವಿದರಿಂದ ಲವ-ಕುಶ ಕಾಳಗ ಯಕ್ಷಗಾನ ನಡೆಯಿತು.