ಲೋಕಬಂಧು ನ್ಯೂಸ್ | ಮೂಡುಬಿದಿರೆ, ಮಾ.16
ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಾ.19ರಿಂದ 29ರ ವರೆಗೆ ವಾರ್ಷಿಕ ಜಾತ್ರೆ ಶ್ರೀರಾಮನವಮಿ ಮಹೋತ್ಸವ ನಡೆಯಲಿದೆ.
ಚಾಂದ್ರಮಾನ ಯುಗಾದಿ ಮಾ.19ರಂದು ಬೆಳಿಗ್ಗೆ ಧ್ವಜಾರೋಹಣ ನಡೆಯಲಿದೆ. ಮಾ.27ರಂದು ಮಧ್ಯಾಹ್ನ 12.06 ಗಂಟೆಗೆ ಶ್ರೀರಾಮ ಜನ್ಮೋತ್ಸವ, ರಾತ್ರಿ ಪುಷ್ಪರಥೋತ್ಸವ, 28ರಂದು ಬ್ರಹ್ಮರಥೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು ಮಾ.29ರಂದು ಧ್ವಜಾವರೋಹಣ, ಅವಭೃತೋತ್ಸವ ನಡೆಯಲಿದೆ.
ಜಾತ್ರಾ ದಿನಗಳಲ್ಲಿ ವಿಶೇಷ ಪೂಜೆ, ಚತುರ್ವೇದ, ಸುಂದರಕಾಂಡ- ಪುರಾಣ ಪಾರಾಯಣ, ರಾತ್ರಿ ಪಲ್ಲಕಿ- ವಾಹನೋತ್ಸವ ನಡೆಯಲಿದೆ.
ಪ್ರತಿದಿನ ಸಂಜೆ 6.30ರಿಂದ ಶಿರಸಿ ನಾರಾಯಣ ದಾಸರಿಂದ ಕಥಾಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾ.27ರಂದು ಸಂಜೆ 6ರಿಂದ ಬೆಂಗಳೂರಿನ ವಿದ್ವಾನ್ ಶ್ರೀ ತಿರುಮಲೈ ಶ್ರೀನಿವಾಸ ಬಳಗದವರಿಂದ ಭಕ್ತಿ ಸಂಗೀತ, 28ರಂದು ಸಂಜೆ 6.30ರಿಂದ ಮಂಗಳೂರು ಉರ್ವ ನಾಟ್ಯಾಲಯದ ವಿನಯಾ ರಾವ್ ಶಿಷ್ಯೆಯರಿಂದ ಭರತನಾಟ್ಯ ನಡೆಯಲಿದೆ.
ಮಹೋತ್ಸವದ ಪೂರ್ವಭಾವಿಯಾಗಿ ಮಾ.18ರಂದು ರಾತ್ರಿ ಕೋಠಿ (ಉಗ್ರಾಣ) ಪೂಜೆ ನಡೆಯಲಿದ್ದು, ಈ ಸಂದರ್ಭದಲ್ಲಿ ಶ್ರೀದೇವಳದ ಸಂಪಿಗೆಯಲ್ಲಿರುವ ಮಹಾದ್ವಾರಕ್ಕೆ ಲೆಕ್ಸಾ ಕಂಪನಿ ಸೇವಾರ್ಥವಾಗಿ ನಿರ್ಮಿಸಿಕೊಟ್ಟಿರುವ ಶಾಶ್ವತ ದೀಪಾಲಂಕಾರ ಉದ್ಘಾಟನೆ ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಶ್ರೀ ದೇವಳದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.