2028ರ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ

ಲೋಕಬಂಧು ನ್ಯೂಸ್, ಪುತ್ತೂರು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂದಿನ ಚುನಾವಣೆಯಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿಕೊಳ್ಳಲಿದೆ. ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿ ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರು ತಿಪ್ಪರಲಾಗ ಹೊಡೆದರೂ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಲ್ಲಿ ತರುವ ಕೆಲಸ ಹೇಗೆ ಮಾಡಬೇಕು ಎಂಬುವುದು ನಮಗೆ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ರಾಜ್ಯದ ಮೊದಲ ಕಾಂಗ್ರೆಸ್ ಭವನಕ್ಕೆ ಫೆಬ್ರವರಿ 6ರಂದು ಶುಕ್ರವಾರ ಶಿಲಾನ್ಯಾಸ ನೆರವೇರಿಸುವ ಮೂಲಕ 100 ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅವರು ಚಾಲನೆ ನೀಡಿದರು.


ಓಟು ಕಸಿಯುವ ತಂತ್ರಗಾರಿಕೆ
ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಕಾಂಗ್ರೆಸ್ ಪರ ಸಮುದಾಯಗಳ ಓಟು ಕದಿಯುವ ತಂತ್ರಗಾರಿಕೆ ನಡೆಸಲಾಗುತ್ತಿದೆ. ಈ ಬಗ್ಗೆ ನಾವು ಸದಾ ಜಾಗೃತರಾಗಬೇಕಾಗಿದೆ. ಈ ಸವಾಲನ್ನು ಎದುರಿಸಲು ಮುಂದಾಗಬೇಕು. ಅದಕ್ಕಾಗಿ ಕಾಂಗ್ರೆಸ್ ಬೂತ್ ಕಾರ್ಯಕರ್ತರು ನಮ್ಮ ಓಟುಗಳನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.


ನಮ್ಮಲ್ಲಿ ಯಾವುದೇ ಗುಂಪುಗಳಿಲ್ಲ. ಅದೆಲ್ಲವೂ ಮಾಧ್ಯಮಗಳು ಮಾಡುತ್ತಿರುವುದು. ನಮ್ಮಲ್ಲಿರುವುದು ಕಾಂಗ್ರೆಸ್ ಎಂಬ ಗುಂಪು. ಸರ್ಕಾರ ದಿವಾಳಿಯಾಗಿದೆ ಎಂದು ಗುಲ್ಲೆಬ್ಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಆದರೆ, 1900 ಕೋಟಿ ಅನುದಾನ ಪುತ್ತೂರಿಗೆ ಬಂದಿದೆ. 1,025 ಕೋಟಿ ಮಂಜೂರಾಗಲಿದೆ. ಇಷ್ಟೊಂದು ಅನುದಾನ ನನ್ನ ಕ್ಷೇತ್ರಕ್ಕೂ ಬಂದಿಲ್ಲ ಎಂದವರು ಹೇಳಿದರು.


ಭೂ ಗ್ಯಾರಂಟಿ ಘೋಷಣೆ
ಭೂ ದಾಖಲೆ ವ್ಯವಸ್ಥೆ ಸರಿಪಡಿಸುವ ಭೂ ಗ್ಯಾರಂಟಿ ಯೋಜನೆ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು‌‌ 1000 ದಿನಗಳ ಹಿನ್ನೆಲೆಯಲ್ಲಿ ಘೋಷಣೆಯಾಗಲಿದೆ. ಫೆ.13ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಾವಿರ ದಿನಗಳಾಗಲಿವೆ. ಫೆ.14ರಂದು ಹಾವೇರಿಯಲ್ಲಿ ನಡೆಯುವ ಈ ಆಚರಣೆಯಲ್ಲಿ ಹೊಸ ಗ್ಯಾರಂಟಿ ಘೋಷಣೆ ಮಾಡಲಾಗುವುದು ಎಂದವರು ಹೇಳಿದರು.


ಸೇವೆ ಮೂಲಕ ಜನರ ಪ್ರೀತಿ
ಪಕ್ಷ ಎಂದರೆ ಬೃಹತ್ ಮಾವಿನಮರ ಇದ್ದಂತೆ. ಮಾವಿನ ಮರ ಕೆಲವರಿಗೆ ಹಣ್ಣು ಕೊಡುತ್ತದೆ. ಕೆಲವರಿಗೆ ನೆರಳು ಕೊಡುತ್ತದೆ. ಆದರೆ, ಅದನ್ನು ಬೆಳೆಸುವ ಉಳಿಸುವ ಕೆಲಸ ನಮ್ಮದ್ದಾಗಿದೆ. ಯಾವುದೇ ಪ್ರಶ್ನೆ ಮಾಡುವುದಿದ್ದರೂ ಪಕ್ಷ ಅಧಿಕಾರದಲ್ಲಿರಬೇಕು. ಜೊತೆಗೆ ಪಕ್ಷ ಬೆಳೆಯಲು ಶಿಸ್ತು ಬೇಕು. ಸೇವೆಯಿಂದ ಜನರ ಪ್ರೀತಿಯನ್ನು ಗಳಿಸಬೇಕು. ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಆಗಬೇಕು.


ಮುಂಬರುವ ತಾ.ಪಂ., ಜಿ.ಪಂ. ಹಾಗೂ ಗ್ರಾಮ ಪಂಚಾಯತ್ ಚುನಾವಣೆ ಬರಲಿದೆ. ಕಾರ್ಯಕರ್ತರು ತಮ್ಮ ನಡುವೆ ಇರುವ ಗೊಂದಲಗಳು ಇರುವುದು ಸಹಜ. ಆದರೆ, ಪಕ್ಷದ ಸಂಘಟನೆ ವಿಚಾರ ಬಂದಾಗ ಅದೆಲ್ಲವನ್ನೂ ಬಿಟ್ಟು ಪಕ್ಷ ಸಂಘಟನೆಗೆ ಮುಂದಾಗಬೇಕು.


ಪುತ್ತೂರಿನ ಇತಿಹಾಸದಲ್ಲಿಯೇ ಬಾರದ ಅನುದಾನ ಪುತ್ತೂರಿಗೆ ಬಂದಿದೆ. ಪುತ್ತೂರಿನಂಥ ತಾಲೂಕು ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಬಂದಿರುವುದೇ ದೊಡ್ಡ ಸಾಧನೆ. ಪ್ರಸ್ತುತ ಶಿಲಾನ್ಯಾಸಗೊಂಡ ಕಾಂಗ್ರೆಸ್ ಭವನ ಮುಂದಿನ 8 ತಿಂಗಳೊಳಗೆ ಉದ್ಘಾಟನೆಗೊಳ್ಳಲಿದೆ. ಅದಕ್ಕೆ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಬರಬೇಕು ಎಂಬುದು ನಮ್ಮೆಲ್ಲರ ಆಸೆ ಎಂದು ಹೇಳಿದ ಶಾಸಕರು ತಪ್ಪು ಮಾಡಿದರೆ ಹೇಳಿ ನನ್ನನ್ನು ತಿದ್ದಿಕೊಳ್ಳುತ್ತೇನೆ ಎಂದರು.


ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಮತದಾರದ ಹಕ್ಕನ್ನು ಕಸಿದುಕೊಳ್ಳುವ ಕೆಲಸ, ಕಾಂಗ್ರೆಸ್ ಪಕ್ಷದ ಓಟನ್ನು ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ. ಅದರ ಬಗ್ಗೆ ನಾವು ಜಾಗೃತರಾಗಿರಬೇಕು. ಅದಕ್ಕಾಗಿ ಪಕ್ಷದ ಸಂಘಟನೆ ಅತೀ ಅಗತ್ಯವಾಗಿದೆ. ವಿರೋಧ ಪಕ್ಷದ ಓಟುಗಳನ್ನು ನಾವು ಕಸಿದುಕೊಳ್ಳಬೇಕು ಎಂದರು.


ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದ.ಕ. ಜಿಲ್ಲೆ ಕುಸ್ತಿ ಅಖಾಡ ಇದ್ದ ಹಾಗೆ. ಇಲ್ಲಿ ಒಮ್ಮೆ ಬಿಜೆಪಿ ಪ್ರಾಬಲ್ಯವಾದರೆ ಮತ್ತೊಮ್ಮೆ ಕಾಂಗ್ರೆಸ್ ಪ್ರಾಬಲ್ಯ ಮೆರೆಯುತ್ತದೆ. ಭೂ ಸುಧಾರಣೆ, ಅಕ್ರಮ ಸಕ್ರಮ, 94ಸಿ ಯೋಜನೆ, ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಹೆಚ್ಚು ಫಲಾನುಭವಿಗಳಿರುವುದು ದ.ಕ. ಜಿಲ್ಲೆಯಲ್ಲಿ. ಕಾಂಗ್ರೆಸಿನಿಂದ ಬಡವರಿಗಾಗಲೀ, ಅಲ್ಸಂಖ್ಯಾತರಿಗಾಗಲೀ ಅನ್ಯಾಯವಾಗಿಲ್ಲ. ಆದರೆ, ಜನರ ಮನಸ್ಸನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲೂ ಅಡ್ಜಸ್ಟ್‌ಮೆಂಟ್ ರಾಜಕೀಯ ಮಾಡುವವರೂ ಇದ್ದಾರೆ ಎಂದರು.


ಮುಖಂಡರಾದ ಹರೀಶ್ ಕುಮಾರ್, ಪದ್ಮರಾಜ್ ಪೂಜಾರಿ, ಇನಾಯತ್ ಅಲಿ, ಶಾಲೆಟ್ ಪಿಂಟೊ, ಮಮತಾ ಗಟ್ಟಿ, ಮಹಮ್ಮದ್ ಆಲಿ, ಉಷಾ ಅಂಚನ್, ಉಮಾನಾಥ ಶೆಟ್ಟಿ ಪೆರ್ನೆ, ಎಂ.ಬಿ. ವಿಶ್ವನಾಥ ರೈ, ಪದ್ಮನಾಭ ಪೂಜಾರಿ, ಅನಿತಾ ಹೇಮನಾಥ ಶೆಟ್ಟಿ, ಅಮಳ ರಾಮಚಂದ್ರ, ಫಾರೂಕ್ ಪೆರ್ನೆ, ಯು.ಟಿ ತೌಸೀಫ್, ಎನ್.ಚಂದ್ರಹಾಸ ಶೆಟ್ಟಿ ಮೊದಲಾದವರಿದ್ದರು.


ಪುತ್ತೂರುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಆಳ್ವ ಸ್ವಾಗತಿಸಿದರು. ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ವಂದಿಸಿದರು. ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.