ಲೋಕಬಂಧು ನ್ಯೂಸ್ | ಶಿವಮೊಗ್ಗ, ಜೂ.15
ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ (ಜಲ್ಲಿ ಮತ್ತು ಸರಕು ತುಂಬಿದ ವಾಹನಗಳು)ಗಳ ಸಂಚಾರವನ್ನು ಜೂ. 15ರಿಂದ ಮಳೆಗಾಲ ಮುಗಿಯುವ ವರೆಗೂ ನಿಷೇಧಿಸಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಭಾರಿ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಆದೇಶಿಸಿದ್ದಾರೆ.
ಶಿವಮೊಗ್ಗದಿಂದ ಹೊಸನಗರ- ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ಮತ್ತು ಉಡುಪಿಗೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟಿಯಲ್ಲಿ ಭೂಕುಸಿತ ಸಂಭವಿಸಿದ ನಂತರ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿ ನಡೆಯುತ್ತಿದೆ.
ಅದು ಪೂರ್ಣಗೊಳ್ಳದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ- ಮಲ್ಪೆ- ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಹೆಚ್ಚಿನ ಓಡಾಟವಿದೆ. ಮುಂದಿನ ದಿನಗಳಲ್ಲಿ ಇದು ಮುಂದುವರಿದಲ್ಲಿ ಅಲ್ಲಲ್ಲಿ ರಸ್ತೆಯ ಬದಿ ಭೂಕುಸಿತ, ಅಪಘಾತ ಆಗುವ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವ ಸಂಭವವಿದೆ.
ಅಲ್ಲದೆ, ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮಣಿಪಾಲ, ಉಡುಪಿ, ಮಂಗಳೂರಿಗೆ ಹೋಗುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ನಾಗರಿಕರಿಗೆ ಇರುವ ಸಂಪರ್ಕ ಬಂದ್ ಆದರೆ ನಾಲ್ಕು ಜಿಲ್ಲೆಯ ಜನರಿಗೆ ತುಂಬಾ ತೊಂದರೆಯಾಗಲಿದ್ದು ಈ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪರ್ಯಾಯ ಮಾರ್ಗ
ತೀರ್ಥಹಳ್ಳಿ- ಉಡುಪಿಗೆ ತೆರಳುವ ಭಾರಿ ವಾಹನಗಳು ತೀರ್ಥಹಳ್ಳಿ-ನಗರ- ನಾಗೋಡಿ- ಕೊಲ್ಲೂರು- ಕುಂದಾಪುರ- ಉಡುಪಿ ಮತ್ತು ತೀರ್ಥಹಳ್ಳಿ- ಶೃಂಗೇರಿ- ಕೆರೆಕಟ್ಟೆ- ಬಜಗೋಳಿ- ಕಾರ್ಕಳ- ಉಡುಪಿ ಮಾರ್ಗವಾಗಿ ಸಂಚರಿಸಬೇಕು.
ಉಡುಪಿ- ತೀರ್ಥಹಳ್ಳಿ ಕಡೆಗೆ ಹೋಗುವ ಭಾರಿ ವಾಹನಗಳು ಉಡುಪಿ- ಕುಂದಾಪುರ- ಕೊಲ್ಲೂರು- ನಾಗೋಡಿ- ನಗರ- ತೀರ್ಥಹಳ್ಳಿ ಮತ್ತು ಕಾರ್ಕಳ- ಬಜಗೋಳಿ- ಕೆರೆಕಟ್ಟೆ- ಶೃಂಗೇರಿ- ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
