ಲೋಕಬಂಧು ನ್ಯೂಸ್ | ಕೊಲ್ಲೂರು, ಜೂ.12
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು.ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಅಪರಾಹ್ನ 3.30ರ ವೇಳೆಗೆ ಆಗಮಿಸಿದ ವಿಜಯ್ ಅವರು ಮೊದಲು ಪ್ರವಾಸಿ ಮಂದಿರಕ್ಕೆ ತೆರಳಿದರು.
ಆಕರ್ಷಕ ಕೆಂಪು ಶಲ್ಯ ಹೊದ್ದಿದ್ದ ವಿಜಯ್ ಅವರಿಗೆ ದೇವಾಲಯದ ಅರ್ಚಕರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು. ಎಲ್ಲರಿಗೂ ಕೈಮುಗಿದ ವಿಜಯ್ ಅವರು ದೇವಾಲಯ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಹರ್ಷೋದ್ಘಾರಗೈದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
ಸಿಎಂ ವಿಜಯ್ ಅವರು ಯಾವುದೇ ವಿಶೇಷ ಪೂಜೆ ಸಲ್ಲಿಸಿಲ್ಲ. ಕೇವಲ ದೇವಿ ದರ್ಶನ ಮತ್ತು ಪ್ರಾರ್ಥನೆ ಸಲ್ಲಿಸಿದರು. ದೇವಳದ ಅರ್ಚಕ ಹಾಗೂ ಆಡಳಿತ ಸಮಿತಿ ಸದಸ್ಯ ನಿತ್ಯಾನಂದ ಅಡಿಗ ಸಂಕಲ್ಪ ಮಾಡಿಸಿ, ಕೈಗೆ ರಕ್ಷಾದಾರ ಕಟ್ಟಿದರು. ಸುಮಾರು ಅರ್ಧ ಗಂಟೆ ಕಾಲ ದೇವಳದಲ್ಲಿದ್ದ ವಿಜಯ್ ಅವರು ದೇವಿಗೆ 1.600 ಕೆಜಿ ತೂಕದ ಬೆಳ್ಳಿಯ ಖಡ್ಗ ಸಮರ್ಪಿಸಿದರು.
ದೇವಳದ ಆಡಳಿತ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ, ಸದಸ್ಯರಾದ ಸುರೇಂದ್ರ ಶೆಟ್ಟಿ, ರಘುರಾಮ ದೇವಾಡಿಗ, ಅಭಿಲಾಷಾರಾಣಿ ಮತ್ತು ಹೆರಿಯ ದೇವಾಡಿಗ, ಮಾಜಿ ಶಾಸಕ ಗೋಪಾಲ ಪೂಜಾರಿ, ದೇವಳದ ಆಡಳಿತಾಧಿಕಾರಿ ರವೀಂದ್ರ ಶೆಟ್ಟಿ, ದೇವಳದ ತಂತ್ರಿ ರಾಮಚಂದ್ರ ಅಡಿಗ, ಎಸ್.ಪಿ. ಹರಿರಾಮ್ ಶಂಕರ್, ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್. ಮೊದಲಾದವರಿದ್ದರು.
ವ್ಯಾಪಕ ಭದ್ರತೆ
ಖ್ಯಾತ ನಟ ಮತ್ತು ಸಿಎಂ ವಿಜಯ್ ಅವರನ್ನು ಕಾಣಲು ವಿವಿಧೆಡೆಯಿಂದ ಅನೇಕ ಮಂದಿ ಅಭಿಮಾನಿಗಳು ಕುತೂಹಲದಿಂದ ಆಗಮಿಸಿದ್ದರು. ಭಾರೀ ಸಂಖ್ಯೆಯಲ್ಲಿದ್ದ ಪೊಲೀಸರು ನೆರೆದಿದ್ದವರನ್ನು ಹೊರ ಕಳುಹಿಸಿದರು.
ಮಧ್ಯಾಹ್ನ 1 ಗಂಟೆಯಿಂದಲೇ ದೇವಾಲಯದ ಬಳಿ ಕಾದು ಕುಳಿತಿದ್ದ ಅಭಿಮಾನಿಗಳು, ಮರ, ಕಟ್ಟಡಗಳ ಮೇಲೆ ಹತ್ತಿ ಕುಳಿತಿರುವ ದೃಶ್ಯ ಕಂಡುಬಂತು. ಮಳೆಯ ನಡುವೆಯೂ ಕಾದು ಕುಳಿತಿದ್ದ ಕುತೂಹಲಿಗಳು ಟಿವಿಕೆ ಪಕ್ಷದ ಚಿಹ್ನೆಯ ಬ್ಯಾನರ್ ಪ್ರದರ್ಶಿಸಿ ಶಿಳ್ಳೆ ಹೊಡೆದು ವಿಜಯ್ ಪರ ಘೋಷಣೆ ಕೂಗಿದರು.
ಇದೇ ಮೊದಲ ಬಾರಿ ವಿಜಯ್ ಕೊಲ್ಲೂರಿಗೆ ಆಗಮಿಸಿರುವುದು ವಿಶೇಷವಾಗಿತ್ತು. ಈ ಹಿಂದೆ ವಿಜಯ್ ಕುಟುಂಬಿಕರು ದೇವಳಕ್ಕೆ ಆಗಮಿಸಿದ್ದಾಗಿ ಅರ್ಚಕರೋರ್ವರು ತಿಳಿಸಿದರು. ಸಿಎಂ ವಿಜಯ್ ಅವರನ್ನು ದೇವಳದ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು.
ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಎಂ.ಜಿ.ರಾಮಚಂದ್ರನ್ ಮತ್ತು ಜಯಲಲಿತಾ ಅವರು ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಮತ್ತು ಹರಕೆ ಸಲ್ಲಿಸಿದ್ದರು. ಸ್ಟ್ಯಾಲಿನ್ ಬಂದಿಲ್ಲವಾದರೂ ಅವರ ಕುಟುಂಬಿಕರು ಭೇಟಿ ನೀಡಿದ್ದರು.

