ಲೋಕಬಂಧು ನ್ಯೂಸ್ | ಮಂಗಳೂರು, ಆ.6
ಅಯೋಧ್ಯೆ ಶ್ರೀರಾಮ ಮಂದಿರದ ಹುಂಡಿ ಹಣ ಲೂಟಿ ಪ್ರಕರಣ ತೀವ್ರ ಆಘಾತ ತಂದಿದ್ದು, ಪ್ರಕರಣದ ಪಾರದರ್ಶಕ ತನಿಖೆಗೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸಂಪೂರ್ಣ ಮುಕ್ತವಾಗಿದೆ ಎಂದು ವಿಎಚ್ಪಿ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಯಾವುದೇ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಿಚಾರ ಬೆಳಕಿಗೆ ಬಂದ ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ವಿಎಚ್ಪಿ ಒತ್ತಾಯಿಸಿದ್ದು, ಸ್ವತಃ ಎಫ್ಐಆರ್ ದಾಖಲಿಸಿದೆ. ಲ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆಗೆ ಮನವಿ ಮಾಡಿದ್ದು, ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪಾರದರ್ಶಕವಾಗಿ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಸದಸ್ಯ ಅನಿಲ್ ಮಿಶ್ರಾ ಸ್ವಯಂಪ್ರೇರಿತರಾಗಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. 2026ರ ಅಂತ್ಯದ ವೇಳೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಇಒ ನೇಮಕ
ಭವಿಷ್ಯದಲ್ಲಿ ಇಂಥ ಲೋಪಗಳು ಮರುಕಳಿಸದಂತೆ ತಡೆಯಲು ವೃತ್ತಿಪರ ದೇವಸ್ಥಾನ ಆಡಳಿತದ ಅನುಭವವಿರುವ ಮುಖ್ಯ ನಿರ್ವಹಣಾಧಿಕಾರಿ (ಸಿಇಒ) ನೇಮಕ ಮಾಡಲಾಗುವುದು. ಆಧುನಿಕ ತಂತ್ರಜ್ಞಾನ ಹಾಗೂ ಪಾರದರ್ಶಕ ಲೆಕ್ಕಪತ್ರ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಸಿಇಒ ಹುದ್ದೆಗೆ ದೇಶದ ವಿವಿಧ ಭಾಗಗಳಿಂದ 5,000ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು,
ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದರು.
ಸಾಧು-ಸಂತರ ನಿಂದನೆಗೆ ವಿಪಕ್ಷಗಳಿಗೆ ಎಚ್ಚರಿಕೆ
ಸಂಸತ್ ಭವನದ ಎದುರು ಸಾಧು ವೇಷ ಧರಿಸಿ ಸಂಸದ ಪಪ್ಪು ಯಾದವ್ ಹಾಗೂ ವಿಪಕ್ಷ ನಾಯಕರು ನಡೆಸಿದ ಚಡಾವಾ ಚೋರಿ ಪ್ರತಿಭಟನೆಯನ್ನು ವಿಎಚ್ಪಿ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ
ಅಲೋಕ್ ಕುಮಾರ್ ತೀವ್ರವಾಗಿ ಖಂಡಿಸಿದರು. ಭಗವಾ ವಸ್ತ್ರ ಮತ್ತು ಸಂತ ಸಮುದಾಯಕ್ಕೆ
ಅಪಮಾನ ಎಸಗುವ ಮೂಲಕ ವಿಪಕ್ಷಗಳು ಮಿತಿಮೀರಿ ವರ್ತಿಸುತ್ತಿವೆ.
ಆರಂಭದಿಂದಲೂ ಶ್ರೀರಾಮ ಮಂದಿರ ಹೋರಾಟವನ್ನು ವಿರೋಧಿಸುತ್ತಾ ಬಂದಿರುವ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕರು ಈಗ ಇಡೀ ಸಂತ ಸಮುದಾಯವನ್ನು 'ಚೋರ್’ ಎಂದು ಬಿಂಬಿಸಲು ಯತ್ನಿಸುತ್ತಿವೆ. ಸನಾತನ ಧರ್ಮ ಮತ್ತು ಸಂತರ ನಿಂದನೆಯನ್ನು ದೇಶದ ಜನರು
ಗಮನಿಸುತ್ತಿದ್ದು, ಮುಂಬರುವ ಚುನಾವಣೆಗಳಲ್ಲಿ ಈ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ
ಕಲಿಸಲಿದ್ದಾರೆ ಎಂದು ಅಲೋಕ್ ಕುಮಾರ್ ಎಚ್ಚರಿಸಿದರು
