ರೆಸಾರ್ಟ್ ನಿರ್ಮಾಣಕ್ಕೆ ಶಾಸಕರ ಅಡ್ಡಗಾಲು

ಲೋಕಬಂಧು ನ್ಯೂಸ್ ಉಡುಪಿ, ಮಾ.22
ಬಡಾನಿಡಿಯೂರಿನ ಸಮುದ್ರ ತೀರದಲ್ಲಿ ರೆಸಾರ್ಟ್ ನಿರ್ಮಿಸಲು ಕಾನೂನಿನಲ್ಲಿ ಯಾವುದೇ ತೊಡಕಿಲ್ಲದಿದ್ದರೂ ವೈಯಕ್ತಿಕ ದ್ವೇಷದಿಂದ ಶಾಸಕ ಯಶಪಾಲ್ ಸುವರ್ಣ ರೆಸಾರ್ಟ್ ನಿರ್ಮಾಣಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಯಾಗುವುದಕ್ಕಿಂತ ಮೊದಲು ನಾನು ಉದ್ಯಮಿ. ರಾಜಕೀಯ ನನ್ನ ವೃತ್ತಿಯಲ್ಲ, ಪ್ರವೃತ್ತಿ. ಹೋಟೆಲ್ ಉದ್ಯಮ ನಡೆಸಿಕೊಂಡು ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ಕಡಲ ತೀರದಲ್ಲಿ 1.6 ಎಕರೆ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲು ಹೊರಟಿದ್ದೆ. ಅನುಮತಿ ಕೂಡಾ ಪಡೆದಿದ್ದೆ. ಸಿಂಗಲ್ ಲೇಔಟ್'ಗೆ 2 ವರ್ಷದಿಂದ ಅರ್ಜಿ ಹಾಕಿದರೂ ಈವರೆಗೆ ಪರವಾನಿಗೆ ಸಿಕ್ಕಿಲ್ಲ. ಹೈಕೋರ್ಟ್ ಮೊರೆ ಹೋದರೂ ಬೇರೆ ಬೇರೆ ಕಾರಣ ನೀಡಿ ನಿರಾಕರಿಸಲಾಗಿದೆ. ಈಮಧ್ಯೆ, ಫೆ.20ರಂದು ಸಿಂಗಲ್ ಲೇ ಔಟ್ ನೀಡಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನ್ಯಾಯಾಲಯದಿಂದ ಪತ್ರ ಬಂದಿದೆ. ಆದರೆ, ಸುಮಾರು ಒಂದು ತಿಂಗಳಾದರೂ ಈತನಕ ಅನುಮತಿ ಪತ್ರ ಕೊಡುತ್ತಿಲ್ಲ.


ಮೂರು ಬಾರಿ ಶಾಸಕನಾಗಿದ್ದ ಸಮಯದಲ್ಲಿ ಯಾರಿಗೆ ಸಮಸ್ಯೆಯಾದರೂ ಜಾತಿ, ಧರ್ಮ ಮರೆತು ಸ್ಪಂದಿಸಿದ್ದೇನೆ. ಆದರೆ, ಈಗ ನನಗೆ ಸಮಸ್ಯೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.


ಉಡುಪಿ ಶಾಸಕ ಯಶಪಾಲ್ ಸುವರ್ಣ ವೈಯಕ್ತಿಕ ದ್ವೇಷಕ್ಕಾಗಿ 24 ತಿಂಗಳಿನಿಂದ ತೊಂದರೆ ನೀಡುತ್ತಿದ್ದಾರೆ. ಜಿಲ್ಲಾಡಳಿತವೂ ಮೌನವಾಗಿದೆ. ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ರೌಡಿಸಮ್' )ಗೆ ಬೆದರುತ್ತಿದ್ದಾರೆ ಎಂದು ಭಟ್ ಆರೋಪಿಸಿದರು.


ಪ್ರಾಧಿಕಾರದ ಎದುರು ಪ್ರತಿಭಟನೆ
ಮಾ. 23ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆ ವರೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಸಾತ್ವಿಕ ಪ್ರತಿಭಟನೆ ನಡೆಸುವುದಾಗಿ ಹೇಳಿದ ರಘುಪತಿ ಭಟ್, ನ್ಯಾಯ ಸಿಗುವ ವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದರ


ಸಿಂಗಲ್ ಲೇ ಔಟ್ ಕೊಡಬೇಕು, ಕೊಡುವುದಿಲ್ಲ ಎಂದಾದರೆ ಹಿಂಬರಹವಾದರೂ ಕೊಡಲಿ. ಹಿಂಬರಹ ನೀಡಿದಲ್ಲಿ ಧರಣಿ ಕೈಬಿಟ್ಟು ಕಾನೂನಿನ ಮೊರೆ ಹೋಗುವುದಾಗಿ ಹೇಳಿದರು.