ಸಿಎ ಅಂತಿಮ ಪರೀಕ್ಷೆ: ಆಳ್ವಾಸ್'ನ 8 ಮಂದಿ ಉತ್ತೀರ್ಣ

ಲೋಕಬಂಧು ನ್ಯೂಸ್ | ಮೂಡುಬಿದಿರೆ, ಜೂ.19
ಕಳೆದ ಮೇ  ತಿಂಗಳಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ದೀಪಕ್ ಹೆಗ್ಡೆ  ಅಖಿಲ ಭಾರತ ಮಟ್ಟದಲ್ಲಿ 28ನೇ ರ್ಯಾಂಕ್ ಗಳಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದಿದ್ದು, ಅವರೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಒಟ್ಟು 8 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಉತ್ತಮ ಸಾಧನೆ ಮಾಡಿದ್ದಾರೆ.
ಸಿಎ ಅಂತಿಮ ಪರೀಕ್ಷೆಯಲ್ಲಿ ದೀಪಕ್ ಹೆಗ್ಡೆ, ನಿತೇಶ್ ಕಾಮತ್, ವೀಕ್ಷಾ ಶೆಟ್ಟಿ, ನಾಗರಾಜ ಮಂಜಿತ್ತಾಯ, ಪ್ರಣವ್ ಎಸ್. ಭಟ್, ವೈಷ್ಣವಿ ಜವಾರ್, ಅಕ್ಷಯ ಬಿ.ಎಸ್. ಮತ್ತು ಸುದೀಪ್ ಉತ್ತೀರ್ಣರಾಗಿದ್ದಾರೆ.


ದೀಪಕ್ ಹೆಗ್ಡೆ ಆಳ್ವಾಸ್'ನ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣದ ಸೌಲಭ್ಯ ಪಡೆದು ಪ್ರೌಢ ಶಿಕ್ಷಣ, ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಪದವಿ ವ್ಯಾಸಂಗದ ಅವಧಿಯಲ್ಲೇ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 10ನೇ ರ್ಯಾಂಕ್ ಗಳಿಸಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಇದೀಗ ಸಿಎ ಅಂತಿಮ ಪರೀಕ್ಷೆಯ ಎರಡೂ ಗ್ರೂಪ್'ಗಳನ್ನು ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿ ಅಖಿಲ ಭಾರತ ಮಟ್ಟದಲ್ಲಿ 28ನೇ ರ್ಯಾಂಕ್ ಗಳಿಸುವ ಮೂಲಕ ಮತ್ತೊಂದು ಗಮನಾರ್ಹ ಸಾಧನೆ ಮಾಡಿದ್ದಾರೆ.


ಸಿಎ ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್  ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಅಖಿಲ ಭಾರತ ಮಟ್ಟದಲ್ಲಿ ಶ್ರೇಷ್ಠ ರ್ಯಾಂಕ್ ಗಳಿಸುತ್ತಿರುವುದು ಗುಣಮಟ್ಟದ ಶಿಕ್ಷಣ ಹಾಗೂ ಫಲಿತಾಂಶ ಕೇಂದ್ರಿತ ತರಬೇತಿಯ ಪ್ರತೀಕ. ಅಖಿಲ ಭಾರತ ಮಟ್ಟದಲ್ಲಿ  6, 10, 23, 28, 33ನೇ ರ್ಯಾಂಕ್'ಗಳ ಜೊತೆಗೆ ಅನೇಕ ವಿದ್ಯಾರ್ಥಿಗಳು ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವುದು ವಿದ್ಯಾರ್ಥಿಗಳ ಪರಿಶ್ರಮ, ಅಧ್ಯಾಪಕರ  ಸಮರ್ಪಿತ ಮಾರ್ಗದರ್ಶನ ಮತ್ತು ಸಂಸ್ಥೆಯ ಶೈಕ್ಷಣಿಕ ಬದ್ಧತೆಗೆ ದೊರೆತ ಗೌರವ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.


ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಡಾ.ಕುರಿಯನ್,  ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂ.ಡಿ., ಸಿಎ ಸಂಯೋಜಕಿ ಅಪರ್ಣಾ ಅಭಿನಂದಿಸಿದ್ದಾರೆ.