ಲೋಕಬಂಧು ನ್ಯೂಸ್ ಉಜಿರೆ, ಜೂ.12
ಚತುರ್ವಿಧ ದಾನ ಪರಂಪರೆಯೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಮಾನವ ಕಲ್ಯಾಣಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡುತ್ತಿರುವ ಬಹುಮುಖಿ ಸೇವಾಕಾರ್ಯಗಳು ಆದರ್ಶ ಹಾಗೂ ಅನುಕರಣೀಯ ಎಂದು ಕೊಡಗು ವಿರಾಜಪೇಟೆಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಶುಕ್ರವಾರ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ವ್ಯಸನ ಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಧರ್ಮಸ್ಥಳದ ವತಿಯಿಂದ ಬದುಕಿಗೆ ಬೇಕಾದ ಎಲ್ಲಾ ಆವಶ್ಯಕತೆಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸಿ ಫಲಾನುಭವಿಗಳ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಆಡು ಮುಟ್ಟದ ಸೊಪ್ಪಿಲ್ಲ, ಧರ್ಮಸ್ಥಳದವರು ಕಾರ್ಯ ಮಾಡದ ಸೇವಾ ಕ್ಷೇತ್ರವಿಲ್ಲ.
ವ್ಯಸನ ಮುಕ್ತರು ದೃಢ ಸಂಕಲ್ಪದಿಂದ ಸಾರ್ಥಕ ಜೀವನ ನಡೆಸಬೇಕು.
ಇದು ಅತ್ಯಂತ ಸಂತೋಷ ಮತ್ತು ಸಂಭ್ರಮದ ಸಮಾರಂಭವಾಗಿದ್ದು ವ್ಯಸನ ಮುಕ್ತರ ಮುಖದಲ್ಲಿರುವ ಮಂದಹಾಸ ಹಾಗೂ ತೃಪ್ತಿ ಆಶಾದಾಯಕವಾಗಿದೆ.
ಡಾ.ಹೆಗ್ಗಡೆಯವರು ತಮ್ಮ ಎಲ್ಲಾ ಸೇವಾಕಾರ್ಯಗಳ ಯಶಸ್ಸನ್ನು ದೇವರ ಸೇವೆ ಎಂದೇ ಭಾವಿಸಿ, ಶ್ರೀ ಸ್ವಾಮಿಗೆ ಅರ್ಪಿಸಿ ಧನ್ಯತೆಯನ್ನು ಹೊಂದುತ್ತಾರೆ. ವ್ಯಸನ ಮುಕ್ತರು ಇಲ್ಲಿಗೆ ಬಂದು ಒಳ್ಳೆಯ ಜ್ಞಾನ ಹಾಗೂ ವಿಚಾರಗಳನ್ನು ಮನದಲ್ಲಿ ತುಂಬಿಕೊಂಡು ಮುಂದೆ ಸಾರ್ಥಕ ಜೀವನ ನಡೆಸಬೇಕು. ಕಾರಣ ಇತರ ಕ್ಷೇತ್ರಗಳಲ್ಲಿ ಮಾಡಿದ ಪಾಪ ಕರ್ಮಗಳು ಪುಣ್ಯಕ್ಷೇತ್ರದಲ್ಲಿ ನಾಶವಾಗುತ್ತವೆ. ಪುಣ್ಯಕ್ಷೇತ್ರದಲ್ಲಿ ಪಾಪ ಮಾಡಿದರೆ ವಜ್ರಲೇಪದಂತೆ ಅದು ಬದುಕಿನಲ್ಲಿ ಶಾಶ್ವತವಾಗಿರುತ್ತದೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.
ನವಜೀವನ ಪ್ರಶಸ್ತಿ ಪ್ರದಾನ ಮಾಡಿದ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ವ್ಯಸನ ಮುಕ್ತರು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ಕೆಲಸ ಕಾರ್ಯಗಳನ್ನು ಸಂತೋಷದಿಂದ ಮಾಡಿ ಗೌರವಯುತ ಹಾಗೂ ನೆಮ್ಮದಿಯ ಜೀವನ ನಡೆಸಬೇಕು ಎಂದರು.
ವಾರ್ಷಿಕ ವರದಿ ಬಿಡಗಡೆಗೊಳಿಸಿದ ಹೇಮಾವತಿ ವೀ. ಹೆಗ್ಗಡೆ, ಮದ್ಯಪಾನದಂಥ ದುಶ್ಚಟಗಳಿಂದ ಕೊಲೆ, ಅನ್ಯಾಯ, ಅತ್ಯಾಚಾರ ಹೆಚ್ಚಾಗುತ್ತದೆ. ಮಹಿಳೆಯರ ಜೀವನ ನರಕ ಯಾತನೆಯಾಗುತ್ತದೆ. ಮಾನವ ಜನ್ಮ ಶ್ರೇಷ್ಠವಾಗಿದ್ದು ಬುದ್ಧಿ, ವಿವೇಕ ಮತ್ತು ಶಕ್ತಿಯ ಸದುಪಯೋಗ ಮಾಡಿ ಸುಖ ಶಾಂತಿ ನೆಮ್ಮದಿಯ ಕುಟುಂಬ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಫಲಾನುಭವಿಗಳ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಿದ ಯಶಸ್ವಿ ಕಾರ್ಯಕ್ರಮಗಳ ಮಾಹಿತಿ ನೀಡಿದರು.
'ಜಾಗೃತಿ ಅಣ್ಣ' ಮತ್ತು 'ಜಾಗೃತಿ ಮಿತ್ರ' ಪ್ರಶಸ್ತಿ
ಹೊನ್ನಾವರದ ಮಂಜು ನಾಯ್ಕ, ನಂಜನಗೂಡು ಮಣಿಕಂಠ ಮತ್ತು ಗದಗ ಜಿಲ್ಲೆಯ ನವಲಗುಂದದ ಜಗದೀಶ ಮಲ್ಲಪ್ಪ ಬ್ಯಾಳಿ ಅವರಿಗೆ 'ಜಾಗೃತಿ ಅಣ್ಣ' ಹಾಗೂ ಹುಬ್ಬಳ್ಳಿಯ ಸಿದ್ದಪ್ಪ ಕಲ್ಲಪ್ಪ ನೀಲರಗಿ, ಅಥಣಿಯ ಅಂದಾನಿ ದುರದುಂಡೆಪ್ಪ, ಶಿವಮೊಗ್ಗದ ರಮೇಶ್ ಎಸ್.ಎಲ್., ಗದಗದ ಶಿವಾನಂದ ಕುರಿ, ತುಮಕೂರಿನ ರವಿಕುಮಾರ್ ಮತ್ತು ವಿಜಯಪುರದ ಬಬಲೇಶ್ವರ ಸುಭಾಶ್ ಅವರಿಗೆ 'ಜಾಗೃತಿ ಮಿತ್ರ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪಾನಮುಕ್ತರ ಪರವಾಗಿ ಕೂಡ್ಲಿಗಿಯ ಸತೀಶ್ ಮತ್ತು ತುಮಕೂರಿನ ಮಂಜುಳಾ ಅನಿಸಿಕೆ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ವ್ಯಸನ ಮುಕ್ತರು ದೃಢ ಸಂಕಲ್ಪದಿಂದ ಇದ್ದು ಮುಂದೆ ಯಾವುದೇ ಆಮಿಷ, ಒತ್ತಡಕ್ಕೆ ಒಳಗಾಗಿ ಮತ್ತೆ ದುಶ್ಚಟಕ್ಕೆ ಬಲಿಯಾಗಬಾರದು. ತಾವು ಸಾರ್ಥಕ ಜೀವನ ನಡೆಸುವುದರೊಂದಿಗೆ ಇತರ ಮದ್ಯ ವ್ಯಸನಿಗಳೂ ವ್ಯಸನ ಮುಕ್ತರಾಗುವಮತೆ ಪ್ರೇರಣೆ, ಸಹಕಾರ ನೀಡಬೇಕು ಎಂದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್, ಈ ವರೆಗೆ 2,063 ಮದ್ಯ ವರ್ಜನ ಶಿಬಿರಗಳ ಮೂಲಕ 1 ಲಕ್ಷ 38 ಸಾವಿರ ಮದ್ಯ ವ್ಯಸನಿಗಳನ್ನು ವ್ಯಸನ ಮುಕ್ತರಾಗಿ ಪರಿವರ್ತನೆ ಮಾಡಿದ್ದು ಅದಕ್ಕಾಗಿ 75 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬಾದಾಮಿ ವಂದಿಸಿದರು. ಯೋಜನಾಧಿಕಾರಿ ಗಣೇಶ್ ಅಚಾರ್ಯ ನಿರ್ವಹಿಸಿದರು.