ಹಿಂದೂ ಧರ್ಮವೇ ನೋಂದಣಿಯಾಗಿಲ್ಲ: ಖರ್ಗೆಗೆ ಭಾಗವತ್ ತಿರುಗೇಟು

ಲೋಕಬಂಧು ನ್ಯೂಸ್ | ತಿರುವನಂತಪುರಂ, ಜೂ.16
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಹಾಗೂ ಕಾನೂನುಬದ್ಧ ಸ್ಥಾನಮಾನ ಕುರಿತು ಕರ್ನಾಟಕ ಗೃಹಸಚಿವ ಪ್ರಿಯಾಂಕ್ ಖರ್ಗೆ ಎತ್ತಿರುವ ಪ್ರಶ್ನೆಗಳಿಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಕ್ರಿಯೆ ನೀಡಿ, ಭಾರತದಲ್ಲಿ ಅನೇಕ ಸಂಸ್ಥೆಗಳು ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ಹಿಂದೂ ಧರ್ಮವೇ ನೋಂದಣಿಯಾಗಿಲ್ಲ ಎಂದು ಹೇಳುವ ಮೂಲಕ ಪ್ರಿಯಾಂಕ್ ಖರ್ಗೆ ಬೇಡಿಕೆಗೆ ತಿರುಗೇಟು ನೀಡಿದ್ದಾರೆ.
ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇದು ರಾಜಕೀಯ ಗಿಮಿಕ್. ಅವರು ಪ್ರಯತ್ನಿಸಲಿ. ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ಇಂಥ ಸವಾಲುಗಳನ್ನು ಎದುರಿಸಿದ್ದೇವೆ. ರಾಜಕೀಯ ಉದ್ದೇಶದಿಂದ ಆರ್‌ಎಸ್‌ಎಸ್‌ ಕುರಿತು ಅನುಮಾನಗಳನ್ನು ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಭಾಗವತ್ ಆರೋಪಿಸಿದರು.


ರಹಸ್ಯವಾಗಿ ಕೆಲಸ ಮಾಡುವುದಿಲ್ಲ
ಆರ್‌ಎಸ್‌ಎಸ್‌ ರಹಸ್ಯವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಭಾಗವತ್, ಸಂಘದ ಎಲ್ಲಾ ಚಟುವಟಿಕೆಗಳು ಸಾರ್ವಜನಿಕವಾಗಿ ನಡೆಯುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ. ದೇಶಾದ್ಯಂತ ನಡೆಯುವ ಶಾಖೆಗಳು, ಸಮಾಜೋತ್ಸವಗಳು, ಮಾರ್ಗಚಾಲನೆಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಬಹಿರಂಗವಾಗಿಯೇ ನಡೆಯುತ್ತಿದ್ದು, ಜನರಿಗೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿದೆ ಎಂದವರು ಹೇಳಿದ್ದಾರೆ.


ನೋಂದಣಿ ಕಡ್ಡಾಯವಲ್ಲ
ಸಂಘ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಆರಂಭವಾಯಿತು. ಹಿಂದೂ ಧರ್ಮವನ್ನೇ ನೋಂದಾಯಿಸಲಾಗಿಲ್ಲ. ದೇಶದಲ್ಲಿ ಇನ್ನೂ ಅನೇಕ ಸಂಸ್ಥೆಗಳು ನೋಂದಣಿಯಾಗಿಲ್ಲ. ಸರ್ಕಾರಿ ಅನುದಾನ ಪಡೆಯಲು ಬಯಸುವ ಸಂಸ್ಥೆಗಳು ಮಾತ್ರ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಭಾಗವತ್ ಹೇಳಿದ್ದಾರೆ.


ಕಳೆದ 100 ವರ್ಷಗಳ ಅವಧಿಯಲ್ಲಿ ಆರ್‌ಎಸ್‌ಎಸ್‌ ನೋಂದಾಯಿಸಿಕೊಳ್ಳಬೇಕು ಎಂದು ಯಾವುದೇ ಸರ್ಕಾರ ಅಥವಾ ಸಂಸ್ಥೆ ತಮ್ಮನ್ನು ಒತ್ತಾಯಿಸಿಲ್ಲ. ಆರ್‌ಎಸ್‌ಎಸ್‌ ತನ್ನ ಲಿಖಿತ ಸಂವಿಧಾನವನ್ನು 1960ರಲ್ಲೇ ಸರ್ಕಾರಕ್ಕೆ ಸಲ್ಲಿಸಿತ್ತು. ಸರ್ಕಾರ ಆ ಸಂವಿಧಾನವನ್ನು ಸ್ವೀಕರಿಸಿದ್ದು ಸಂಘವನ್ನು ನೋಂದಾಯಿಸಿಕೊಳ್ಳುವಂತೆ ಯಾವುದೇ ಸೂಚನೆ ನೀಡಿರಲಿಲ್ಲ ಎಂದು ಭಾಗವತ್ ವಿವರಿಸಿದ್ದಾರೆ.


ಆರ್‌ಎಸ್‌ಎಸ್‌ನ ಕಾರ್ಯವೈಖರಿ ಹಾಗೂ ಸಂಘಟನಾ ವ್ಯವಸ್ಥೆ ಕುರಿತು ಸರ್ಕಾರಕ್ಕೆ ಮಾಹಿತಿ ಲಭ್ಯವಿದ್ದರೂ ಈಗ ಹೊಸದಾಗಿ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ ಎಂದು ಮೋಹನ ಭಾಗವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಅನುಮಾನ ಸೃಷ್ಟಿಸುವ ಯತ್ನ
ಜನರ ಮನಸ್ಸಿನಲ್ಲಿ ಆರ್‌ಎಸ್‌ಎಸ್‌ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುವ ಪ್ರಯತ್ನ ನಡೆಯುತ್ತಿದೆ. ಆದರೆ, ಅದು ಯಶಸ್ವಿಯಾಗುವುದಿಲ್ಲ. ಆರ್‌ಎಸ್‌ಎಸ್‌ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅದರ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿದಿದೆ ಎಂದು ಭಾಗವತ್ ಸ್ಪಷ್ಟಪಡಿಸಿದ್ದಾರೆ.