ಲೋಕಬಂಧು ನ್ಯೂಸ್ | ಬೆಂಗಳೂರು, ಜೂ.16
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ನೋಂದಣಿ, ಕಾನೂನುಬದ್ಧ ಸ್ಥಾನಮಾನ ಹಾಗೂ ಹಣಕಾಸು ಪಾರದರ್ಶಕತೆ ಕುರಿತು ಪ್ರಶ್ನೆ ಎತ್ತಿರುವ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಯಾವ ಕಾನೂನಿನಡಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಏಕೆ ನೋಂದಾಯಿತ ಕಾನೂನುಬದ್ಧ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕುರಿತು ಸ್ಪಷ್ಟನೆ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ತಮ್ಮ ಪತ್ರದ ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ಆರ್ಎಸ್ಎಸ್ಗೆ 100 ವರ್ಷ ಪೂರ್ಣಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ಅವರು, ದೊಡ್ಡ ಪ್ರಮಾಣದಲ್ಲಿ ಜನಸಂಪರ್ಕ ಹೊಂದಿರುವ ಯಾವುದೇ ಸಂಘಟನೆ ಪಾರದರ್ಶಕತೆ ಹಾಗೂ ಸಾಂವಿಧಾನಿಕ ಜವಾಬ್ದಾರಿಯನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಸಾವಿರಾರು ಶಾಖೆ
ಅಖಿಲ ಭಾರತೀಯ ಪ್ರತಿನಿಧಿ ಸಭೆಯ 2025–26ರ ಕರ್ನಾಟಕ ವರದಿಯ ಪ್ರಕಾರ ರಾಜ್ಯದಲ್ಲಿ 4,127 ದೈನಂದಿನ ಶಾಖೆಗಳು, 1,389 ಸಾಪ್ತಾಹಿಕ ಮಿಲನಗಳು, 60 ಮಾಸಿಕ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ ಅದೇ ರೀತಿ 19.61 ಲಕ್ಷಕ್ಕೂ ಹೆಚ್ಚು ಜನರ ಭಾಗವಹಿಸುವಿಕೆಯಲ್ಲಿ 2,194 ಸಮಾಜೋತ್ಸವ ಹಾಗೂ 2.21 ಲಕ್ಷ ಗಣವೇಷಧಾರಿಗಳೊಂದಿಗೆ 562 ಮಾರ್ಗಚಾಲನೆಗಳು ನಡೆದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಂಥ ವ್ಯಾಪಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘಟನೆ ತನ್ನ ಕಾನೂನುಬದ್ಧ ಸ್ಥಾನಮಾನವನ್ನು ಸ್ಪಷ್ಟಪಡಿಸಬೇಕು ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ವಿವರ ಬಹಿರಂಗಪಡಿಸಿ
ಆರ್ಎಸ್ಎಸ್ನ ನೋಂದಣಿ ಸ್ಥಿತಿ, ಕಚೇರಿ ಧಾರಕರ ವಿವರ, ಅನುದಾನ ಮೂಲಗಳು, ವೆಚ್ಚದ ಲೆಕ್ಕಪತ್ರ, ತೆರಿಗೆ ಪಾವತಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪಡೆಯುವ ಅನುಮತಿಗಳ ಕುರಿತು ಮಾಹಿತಿ ಬಹಿರಂಗಪಡಿಸುವ ಅಗತ್ಯವಿದೆ ಎಂದು ಖರ್ಗೆ ಪತ್ರದಲ್ಲಿ ಹೇಳಿದ್ದಾರೆ.
ದೇಶದ ನಾಗರಿಕರು, ಸ್ವಯಂಸೇವಾ ಸಂಸ್ಥೆಗಳು, ಟ್ರಸ್ಟ್ಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಕಂಪನಿಗಳು ಕಾನೂನುಬದ್ಧ ನೋಂದಣಿ, ಲೆಕ್ಕಪತ್ರ ಮತ್ತು ನಿಯಮ ಪಾಲನೆಗೆ ಒಳಪಡಬೇಕಾದರೆ ಆರ್ಎಸ್ಎಸ್ಗೆ ಮಾತ್ರ ವಿನಾಯಿತಿ ಎಂದಹ ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ ತನ್ನ ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿರುವ ಸಂದರ್ಭ ಸಂವಿಧಾನದ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿರುವುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು. ಸಂಘಟನೆ ನೋಂದಣಿ, ಹಣಕಾಸು ಪಾರದರ್ಶಕತೆ ಹಾಗೂ ಅನ್ವಯಿಸುವ ತೆರಿಗೆ ನಿಯಮಗಳನ್ನು ಪಾಲಿಸುವ ಮೂಲಕ ಜವಾಬ್ದಾರಿಯುತ ಸಂಸ್ಥೆಯಾಗಿ ನಡೆದುಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜಕೀಯ ವಲಯದಲ್ಲಿ ಚರ್ಚೆ
ಪ್ರಿಯಾಂಕ್ ಖರ್ಗೆ ಅವರ ಈ ಪತ್ರ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಆಡಳಿತ ಪಕ್ಷದ ನಾಯಕರಿಂದ ಆರ್ಎಸ್ಎಸ್ ಕುರಿತು ಕೇಳಿಬಂದಿರುವ ಈ ಪ್ರಶ್ನೆಗಳಿಗೆ ಸಂಘಟನೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಇನ್ನೊಂದೆಡೆ, ಖರ್ಗೆ ಅವರ ಪತ್ರವನ್ನು ಬೆಂಬಲಿಸುವ ಹಾಗೂ ವಿರೋಧಿಸುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದ್ದು, ಆರ್ಎಸ್ಎಸ್ನ ಕಾನೂನುಬದ್ಧ ಸ್ಥಾನಮಾನ, ಹಣಕಾಸು ಪಾರದರ್ಶಕತೆ ಹಾಗೂ ಸಂಘಟನೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿಯೂ ಚರ್ಚೆ ಆರಂಭವಾಗಿದೆ.