ಲೋಕಬಂಧು ನ್ಯೂಸ್ | ಉಡುಪಿ, ಆ.27
ರಾಜ್ಯ ಕಾಂಗ್ರೆಸ್ ಸರ್ಕಾರದ ಮಿತಿ ಮೀರಿದ ಅಲ್ಪಸಂಖ್ಯಾತರ ಓಲೈಕೆಯಿಂದ ಮತೀಯ ಶಕ್ತಿಗಳು ರಾಜಾರೋಷವಾಗಿ ಪೊಲೀಸರ ಭಯವಿಲ್ಲದೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿದ್ದು, ಬಹುಸಂಖ್ಯಾತ ಹಿಂದೂಗಳಿಗೆ ಈ ಸರ್ಕಾರದಲ್ಲಿ ರಕ್ಷಣೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಬಸವನಗುಡಿಯಲ್ಲಿ ಈದ್ ಮೆರವಣಿಗೆ ಸಾಗುವಾಗ ಕಿಡಿಗೇಡಿಗಳು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಜೀವ ಬೆದರಿಕೆ ಘೋಷಣೆ ಹಾಕಿ ಸ್ಥಳದಲ್ಲಿದ್ದ ಹಿಂದೂ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮೊನ್ನೆ ಪುತ್ತೂರಿನಲ್ಲಿ ಮಹಿಳೆಯೊಬ್ಬರ ಮೇಲೆ ಹಾಡಹಗಲೇ ಅಂಗಡಿಗೆ ನುಗ್ಗಿ ಹಲ್ಲೆ ಮಾಡಿ ಬಳಿಕ ಪೊಲೀಸ್ ಜೀಪ್ ಪ್ರವೇಶಿಸಿ, ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿರುವ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಇಲಾಖೆ ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಪೊಲೀಸ್ ಇಲಾಖೆಯನ್ನು ಕೈಗೊಂಬೆಯನ್ನಾಗಿಸಿರುವ ಕಾಂಗ್ರೆಸ್ ಸರ್ಕಾರ, ಕಣ್ಣಮುಂದೆ ಇಂಥ ಘಟನೆಗಳು ನಡೆಯುತ್ತಿದ್ದರೂ ಪೊಲೀಸರು ಕಣ್ಣುಮುಚ್ಚಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮತಾಂಧ ಶಕ್ತಿಗಳು ಪುಂಡಾಟಿಕೆ ಮೂಲಕ ಹಿಂದೂ ಕಾರ್ಯಕರ್ತರು, ಹಿಂದೂ ಸಮಾಜವನ್ನು ಪ್ರಚೋದಿಸುವ ಕೆಲಸವನ್ನು ಮುಂದುವರಿಸಿದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡುವ ಅನಿವಾರ್ಯತೆ ಎದುರಾಗಲಿದೆ ಎಂಬುದಕ್ಕೆ ಪುತ್ತೂರು ಬಂದ್ ಕರೆಗೆ ಸಮಸ್ತ ಹಿಂದೂ ಜನತೆ ನೀಡಿದ ಬೆಂಬಲವೇ ಸಾಕ್ಷಿ.
ಪೊಲೀಸ್ ಇಲಾಖೆ ತಕ್ಷಣ ಬಸವನಗುಡಿಯಲ್ಲಿ ಪುಂಡಾಟ ಮೆರೆದ ಮತಾಂಧ ಶಕ್ತಿಗಳನ್ನು ತಕ್ಷಣ ಬಂಧಿಸಬೇಕು, ಆರ್.ಎಸ್.ಎಸ್. ವಿರುದ್ಧ ಹೇಳಿಕೆ ನೀಡುವುದನ್ನೇ ದಿನಚರಿಯಾಗಿ ಮಾಡಿಕೊಂಡಿರುವ ಗೃಹ ಸಚಿವರು ಇನ್ನಾದರೂ ಎಚ್ಚೆತ್ತು ರಾಜ್ಯದ ಕಾನೂನು ಸುವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ರಾಜ್ಯದ ಹಿಂದೂ ಸಮಾಜ ತನ್ನ ರಕ್ಷಣೆಗೆ ರಾಜ್ಯ ಸರ್ಕಾರದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ಮತಾಂಧ ಶಕ್ತಿಗಳಿಗೆ ತಾವೇ ಉತ್ತರ ನೀಡುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಯಶಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.
